ಪದ್ಯ ೨೩: ಕುರುಸೇನೆಯ ರಾಜರು ಓಡಿಹೋಗುವುದನ್ನು ಹೇಗೆ ತಪ್ಪಿಸಲಾಯಿತು?

ನೃಪನ ಮೂದಲೆ ನಿಜಕುಲಕ್ರಮ
ಕಪಯಶೋಭಯ ಪಾರಲೌಕಿಕ
ದುಪಹತಿ ಪ್ರತಿಭಟರ ನಗೆ ಸೌಭಟಪರಿತ್ಯಾಗ
ಕೃಪಣತೆಯ ದುಷ್ಕೀರ್ತಿ ಭುಜಬಲ
ದಪದಶಾವಿರ್ಭಾವವೀ ಭೂ
ಮಿಪರ ಮರಳಿಚಿತೇನನೆಂಬೆನು ಭೂಪ ಕೇಳೆಂದ (ಗದಾ ಪರ್ವ, ೧ ಸಂಧಿ, ೨೩ ಪದ್ಯ)

ತಾತ್ಪರ್ಯ:
ಎಲೈ ಧೃತರಾಷ್ಟ್ರ ಕೇಳು, ದುರ್ಯೋಧನನು ಹಂಗಿಸುವ ಪರಿ, ತಮ್ಮ ವಂಶಕ್ಕೆ ಬರುವ ಅಪಕೀರ್ತಿ, ಭಯ, ಪರಲೋಕದಲ್ಲಿ ಉತ್ತಮಗತಿಯ ನಾಶದ ಭಯ, ವಿರೋಧಿಗಳ ಅಪಹಾಸ್ಯದ ನಗೆ, ಅಸಹಾಯಕರಾಗಿ ದೀನರಾದರು ಎಂಬ ಕೆಟ್ಟ ಹೆಸರಿನ ಭೀತಿ, ತಮ್ಮ ಭುಜಬಲಕ್ಕೆ ಅಪದೆಸೆ ಬಂತೆಂಬ ಭಯ ಇವು ಕುರುಸೇನೆಯ ರಾಜರು ಓಡಿಹೋಗುವುದನ್ನು ತಪ್ಪಿಸಿದವು.

ಅರ್ಥ:
ನೃಪ: ರಾಜ; ಮೂದಲೆ: ಛೇಡಿಸುವಿಕೆ; ಕುಲ: ವಂಶ; ಕ್ರಮ: ರೀತಿ; ಅಪಯಶೋ: ಅಪಕೀರ್ತಿ; ಭಯ: ಅಂಜಿಕೆ; ಪಾರಲೌಕಿಕ: ಬೇರೆ ಲೋಕಕ್ಕೆ ಸಂಬಂಧಿಸಿದ; ಉಪಹತಿ: ಹೊಡೆತ; ಪ್ರತಿಭಟ: ವೀರೋಧಿ ಸೈನಿಕ; ನಗೆ: ಸಂತಸ; ಸೌಭಟ: ; ಪರಿತ್ಯಾಗ: ಬಿಡುವುದು; ಕೃಪಣ: ತುಚ್ಛವಾದ, ದೀನ; ದುಷ್ಕೀರ್ತಿ: ಅಪಯಶಸ್ಸು; ಭುಜಬಲ: ಬಾಹು ಪರಾಕ್ರಮ; ಅಪದಶ: ದುರದೃಷ್ಟ; ಆವಿರ್ಭಾವ: ಹುಟ್ಟುವುದು; ಭೂಮಿಪ: ರಾಜ; ಮರಳು: ಹಿಂದಿರುಗು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ನೃಪನ +ಮೂದಲೆ +ನಿಜ+ಕುಲಕ್ರಮಕ್
ಅಪಯಶೋ+ಭಯ +ಪಾರಲೌಕಿಕದ್
ಉಪಹತಿ+ ಪ್ರತಿಭಟರ+ ನಗೆ +ಸೌಭಟ+ಪರಿತ್ಯಾಗ
ಕೃಪಣತೆಯ +ದುಷ್ಕೀರ್ತಿ +ಭುಜಬಲದ್
ಅಪದಶ+ಆವಿರ್ಭಾವವ್+ಈ+ ಭೂ
ಮಿಪರ +ಮರಳಿಚಿತ್+ಏನನೆಂಬೆನು +ಭೂಪ +ಕೇಳೆಂದ

ಅಚ್ಚರಿ:
(೧) ಮೂದಲೆ, ಅಪಯಶ, ಉಪಹತಿ, ದುಷ್ಕೀರ್ತಿ, ಅಪದಶ – ಪದಗಳ ಬಳಕೆ