ಪದ್ಯ ೧೯: ಗೋಗ್ರಹಣದಲ್ಲಿ ಯಾರು ಕುರುಸೈನ್ಯವನ್ನು ತಡೆದಿದ್ದರು?

ಒಂದು ದೆಸೆಯಲಿ ರಾಯನಿಪ್ಪ
ತ್ತೊಂದು ಸಾವಿರ ರಥಸಹಿತುಘೇ
ಯೆಂದು ಬಿಟ್ಟನು ಭೀಮಸೇನನ ರಥದ ಸಮ್ಮುಖಕೆ
ಅಂದು ಗೋಗ್ರಹಣದಲಿ ಫಲಗುಣ
ನಿಂದನನಿಬರಿಗರಸ ಚಿತ್ತೈ
ಸಿಂದು ಸೈರಿಸಿ ನಿಂದನನಿಬರಿಗೊಬ್ಬನೇ ಭೀಮ (ಕರ್ಣ ಪರ್ವ, ೧೫ ಸಂಧಿ, ೧೯ ಪದ್ಯ)

ತಾತ್ಪರ್ಯ:
ಒಂದು ಕಡೆಯಿಂದ ದುರ್ಯೋಧನನು ಇಪ್ಪತ್ತೊಂದು ಸಾವಿರ ರಥಿಕರ ಜೊತೆ ಭೀಮನ ಮೇಲೆ ಉಘೇ ಉಘೇ ಎಂದು ಹೇಳುತ್ತಾ ಆಕ್ರಮಣ ಮಾಡಿದನು. ಈ ಹಿಂದೆ ವಿರಾಟ ರಾಜನ ಮೇಲೆ ಆಕ್ರಮಣ ಮಾಡುವಾಗ ಗೋಗ್ರಹಣದಲ್ಲಿ ಅರ್ಜುನನೊಬ್ಬನೇ ನಮ್ಮನ್ನು ಎದುರಿಸಿದನು, ಇಂದು ಭೀಮನೊಬ್ಬನೇ ಕುರುಸೇನೆಯನ್ನು ಎದುರುನೋಡುತ್ತಿದ್ದಾನೆ ಎಂದು ಸೈನ್ಯದ ರಥಿಕರು ಕುರುರಾಯನಿಗೆ ನುಡಿದನು.

ಅರ್ಥ:
ದೆಸೆ: ದಿಕ್ಕು; ರಾಯ: ರಾಜ; ರಥ: ಬಂಡಿ; ಸಹಿತ: ಜೊತೆ; ಉಘೇ: ಜಯಘೋಷದ ಪದ; ಸಮ್ಮುಖ: ಎದುರು; ಗೋಗ್ರಹಣ: ಗೋವುಗಳನ್ನು ಸರೆಹಿಡಿಯುವುದು; ಫಲುಗುಣ: ಅರ್ಜುನ; ನಿಂದನು: ನಿಲ್ಲಿಸು, ಎದುರು ನಿಲ್ಲು; ಅನಿಬರು: ಅಷ್ಟು ಜನ; ಅರಸ: ರಾಜ; ಚಿತ್ತೈಸು: ಗಮನವಿಟ್ಟು ಕೇಳು; ಇಂದು: ಇವತ್ತು; ಸೈರಿಸು: ತಾಳು;

ಪದವಿಂಗಡಣೆ:
ಒಂದು+ ದೆಸೆಯಲಿ +ರಾಯನ್+ಇಪ್ಪ
ತ್ತೊಂದು +ಸಾವಿರ +ರಥಸಹಿತ+ಉಘೇ
ಯೆಂದು +ಬಿಟ್ಟನು +ಭೀಮಸೇನನ +ರಥದ +ಸಮ್ಮುಖಕೆ
ಅಂದು +ಗೋಗ್ರಹಣದಲಿ+ ಫಲಗುಣನ್
ಇಂದನ್+ಅನಿಬರಿಗ್+ಅರಸ+ ಚಿತ್ತೈಸ್
ಇಂದು +ಸೈರಿಸಿ +ನಿಂದನ್+ಅನಿಬರಿಗ್+ಒಬ್ಬನೇ +ಭೀಮ

ಅಚ್ಚರಿ:
(೧) ಎಂದು, ಒಂದು, ಅಂದು, ಇಂದು – ಪ್ರಾಸ ಪದಗಳು