ಒಂದು ದೆಸೆಯಲಿ ರಾಯನಿಪ್ಪ
ತ್ತೊಂದು ಸಾವಿರ ರಥಸಹಿತುಘೇ
ಯೆಂದು ಬಿಟ್ಟನು ಭೀಮಸೇನನ ರಥದ ಸಮ್ಮುಖಕೆ
ಅಂದು ಗೋಗ್ರಹಣದಲಿ ಫಲಗುಣ
ನಿಂದನನಿಬರಿಗರಸ ಚಿತ್ತೈ
ಸಿಂದು ಸೈರಿಸಿ ನಿಂದನನಿಬರಿಗೊಬ್ಬನೇ ಭೀಮ (ಕರ್ಣ ಪರ್ವ, ೧೫ ಸಂಧಿ, ೧೯ ಪದ್ಯ)
ತಾತ್ಪರ್ಯ:
ಒಂದು ಕಡೆಯಿಂದ ದುರ್ಯೋಧನನು ಇಪ್ಪತ್ತೊಂದು ಸಾವಿರ ರಥಿಕರ ಜೊತೆ ಭೀಮನ ಮೇಲೆ ಉಘೇ ಉಘೇ ಎಂದು ಹೇಳುತ್ತಾ ಆಕ್ರಮಣ ಮಾಡಿದನು. ಈ ಹಿಂದೆ ವಿರಾಟ ರಾಜನ ಮೇಲೆ ಆಕ್ರಮಣ ಮಾಡುವಾಗ ಗೋಗ್ರಹಣದಲ್ಲಿ ಅರ್ಜುನನೊಬ್ಬನೇ ನಮ್ಮನ್ನು ಎದುರಿಸಿದನು, ಇಂದು ಭೀಮನೊಬ್ಬನೇ ಕುರುಸೇನೆಯನ್ನು ಎದುರುನೋಡುತ್ತಿದ್ದಾನೆ ಎಂದು ಸೈನ್ಯದ ರಥಿಕರು ಕುರುರಾಯನಿಗೆ ನುಡಿದನು.
ಅರ್ಥ:
ದೆಸೆ: ದಿಕ್ಕು; ರಾಯ: ರಾಜ; ರಥ: ಬಂಡಿ; ಸಹಿತ: ಜೊತೆ; ಉಘೇ: ಜಯಘೋಷದ ಪದ; ಸಮ್ಮುಖ: ಎದುರು; ಗೋಗ್ರಹಣ: ಗೋವುಗಳನ್ನು ಸರೆಹಿಡಿಯುವುದು; ಫಲುಗುಣ: ಅರ್ಜುನ; ನಿಂದನು: ನಿಲ್ಲಿಸು, ಎದುರು ನಿಲ್ಲು; ಅನಿಬರು: ಅಷ್ಟು ಜನ; ಅರಸ: ರಾಜ; ಚಿತ್ತೈಸು: ಗಮನವಿಟ್ಟು ಕೇಳು; ಇಂದು: ಇವತ್ತು; ಸೈರಿಸು: ತಾಳು;
ಪದವಿಂಗಡಣೆ:
ಒಂದು+ ದೆಸೆಯಲಿ +ರಾಯನ್+ಇಪ್ಪ
ತ್ತೊಂದು +ಸಾವಿರ +ರಥಸಹಿತ+ಉಘೇ
ಯೆಂದು +ಬಿಟ್ಟನು +ಭೀಮಸೇನನ +ರಥದ +ಸಮ್ಮುಖಕೆ
ಅಂದು +ಗೋಗ್ರಹಣದಲಿ+ ಫಲಗುಣನ್
ಇಂದನ್+ಅನಿಬರಿಗ್+ಅರಸ+ ಚಿತ್ತೈಸ್
ಇಂದು +ಸೈರಿಸಿ +ನಿಂದನ್+ಅನಿಬರಿಗ್+ಒಬ್ಬನೇ +ಭೀಮ
ಅಚ್ಚರಿ:
(೧) ಎಂದು, ಒಂದು, ಅಂದು, ಇಂದು – ಪ್ರಾಸ ಪದಗಳು