ಪದ್ಯ ೬೯: ಪಾಂಡುವು ತನ್ನ ಮಕ್ಕಳಿಗೆ ಯಾವ ಸಂಸ್ಕಾರಗಳನ್ನು ಮಾಡಿಸಿದನು?

ಯಾದವರ ಸುಕ್ಷೇಮ ಕುಶಲವ
ನಾದರಿಸಿ ಬಳಿಕಾದ ಪರಮಾ
ಹ್ಲಾದದಲಿ ಕಶ್ಯಪನೊಳಾಲೋಚಿಸಿ ಮಹೀಪಾಲ
ವೈದಿಕೋಕ್ತಿಯ ಚೌಲವುಪನಯ
ನಾದಿ ಸಕಲಕ್ರಿಯೆಗಳನು ಗಾ
ರ್ಗ್ಯಾದಿ ಋಷಿಗಳನುಜ್ಞೆಯಲಿ ಮಾಡಿಸಿದನನಿಬರಿಗೆ (ಆದಿ ಪರ್ವ, ೪ ಸಂಧಿ, ೬೯ ಪದ್ಯ)

ತಾತ್ಪರ್ಯ:
ಯಾದವರು ಕ್ಷೇಮದಿದಂದಾರೆ, ಕುಶಲರಾಗಿದ್ದಾರೆ ಎಂದು ಕೇಳಿ ಪಾಂಡುವಿಗೆ ಮಹದಾನಂದವಾಯಿತು. ಬಳಿಕ ಕಶ್ಯಪ ಮುನಿಗಳೊಂದಿಗೆ ಆಲೋಚಿಸಿ, ಗಾರ್ಗ್ಯ ಮತ್ತು ಇತರರ ಮುನಿಗಳ ಅಪ್ಪಣೆಯಂತೆ ವೈದಿಕ ಸಂಸ್ಕಾರಗಳನ್ನು ತನ್ನ ಮಕ್ಕಳಿಗೆ ಮಾಡಿಸಿದನು.

ಅರ್ಥ:
ಕ್ಷೇಮ: ನೆಮ್ಮದಿ; ಕುಶಲ: ಸೌಖ್ಯ; ಆದರ: ಗೌರವ; ಬಳಿಕ: ನಂತರ; ಆಹ್ಲಾದ: ಸಂತೋಷ, ಆನಂದ; ಆಲೋಚನೆ: ವಿಚಾರ ವಿನಿಮಯ; ಮಹೀಪಾಲ: ರಾಜ; ವೈದಿಕ: ವೇದಕ್ಕೆ ಅನುಗುಣವಾಗಿ; ಉಕ್ತಿ: ಮಾತು, ನುಡಿ; ಚೌಲ: ಹುಟ್ಟು ಕೂದಲನ್ನು ತೆಗೆಸುವುದು; ಉಪನಯನ: ಮುಂಜಿ, ಬ್ರಹ್ಮೋಪದೇಶ; ಸಕಲ: ಎಲ್ಲಾ; ಕ್ರಿಯೆ: ಕಾರ್ಯ; ಋಷಿ: ಮುನಿ; ಅನುಜ್ಞೆ: ಒಪ್ಪಿಗೆ, ಅಪ್ಪಣೆ; ಅನಿಬರು: ಅಷ್ಟುಜನ;

ಪದವಿಂಗಡಣೆ:
ಯಾದವರ +ಸುಕ್ಷೇಮ +ಕುಶಲವನ್
ಆದರಿಸಿ +ಬಳಿಕಾದ +ಪರಮಾ
ಹ್ಲಾದದಲಿ +ಕಶ್ಯಪನೊಳ್+ಆಲೋಚಿಸಿ +ಮಹೀಪಾಲ
ವೈದಿಕೋಕ್ತಿಯ+ ಚೌಲ+ಉಪನಯ
ನಾದಿ +ಸಕಲ+ಕ್ರಿಯೆಗಳನು +ಗಾ
ರ್ಗ್ಯಾದಿ +ಋಷಿಗಳ್+ಅನುಜ್ಞೆಯಲಿ +ಮಾಡಿಸಿದನ್+ಅನಿಬರಿಗೆ

ಅಚ್ಚರಿ:
(೧) ಕ್ಷೇಮ, ಕುಶಲ – ಸಾಮ್ಯಾರ್ಥ ಪದ
(೨) ಸಂಸ್ಕಾರಗಳು – ಚೌಲ, ಉಪನಯನ

ಪದ್ಯ ೨೫: ಸುಪ್ರತೀಕಗಜದ ಆಕ್ರಮಣ ಹೇಗಿತ್ತು?

ಹಿಡಿಹಿಡಿಯಲೋಡಿದನು ದ್ರುಪದನು
ಸಿಡಿದು ಕೆಲಸಾರಿದನು ಪವನಜ
ನೊಡಲುಸುರ ಸಂಬಂಧವಳಿದುದು ಸಿಲುಕಿದನಿಬರಿಗೆ
ಒಡೆಮುರಿದು ಸಾತ್ಯಕಿಯ ರಥವನು
ತುಡುಕಿ ಹಾಯ್ಕಿತು ಭೀಮತನಯನ
ಕೊಡಹಿ ಬಿಸುಟುದು ಕೊಂದುದಗಣಿತ ಕರಿ ತುರಂಗಮವ (ದ್ರೋಣ ಪರ್ವ, ೩ ಸಂಧಿ, ೨೫ ಪದ್ಯ)

ತಾತ್ಪರ್ಯ:
ಅದು ಹಿಡಿಯಲು ಬರುತ್ತಿದ್ದಮ್ತೆ ದ್ರುಪದನು ಓಡಿಹೋದನು. ಪಕ್ಕಕ್ಕೆ ಹಾರಿ ಭೀಮನು ಉಳಿದುಕೊಂಡನು, ಅದಕ್ಕೆ ಸಿಕ್ಕದವರ ದೇಹಕ್ಕೂ ಪ್ರಾಣಕ್ಕೂ ಸಂಬಂಧ ತಪ್ಪಿತು. ಸಾತ್ಯಕಿಯ ರಥವನ್ನು ಸುಪ್ರತೀಕವು ಒಡೆದುಹಾಕಿತು, ಘಟೋತ್ಕಚನನ್ನು ಕೊಡವಿ ಎಸೆಯಿತು. ಲೆಕ್ಕವಿಲ್ಲದಷ್ಟು ಆನೆ ಕುದುರೆಗಳನ್ನು ಕೊಂದಿತು.

ಅರ್ಥ:
ಹಿಡಿ: ಬಂಧಿಸು; ಓಡು: ಧಾವಿಸು; ಸಿಡಿ: ಚಿಮ್ಮು; ಕೆಲ: ಪಕ್ಕ, ಸ್ವಲ್ಪ; ಸಾರು: ಹರಡು; ಪವನಜ: ಭೀಮ; ಒಡಲು: ದೇಹ; ಸುರ: ದೇವತೆ; ಸಂಬಂಧ: ಸಂಪರ್ಕ, ಸಹವಾಸ; ಅಳಿ: ನಾಶ; ಸಿಲುಕು: ಬಂಧನಕ್ಕೊಳಗಾಗು; ಅನಿಬರು: ಅಷ್ಟುಜನ; ಒಡೆ: ಸೀಳು, ಬಿರಿ; ಮುರಿ: ಸೀಳು; ರಥ: ಬಂಡಿ; ತುಡುಕು: ಹೋರಾಡು, ಸೆಣಸು; ಹಾಯ್ಕು: ಇಡು, ಇರಿಸು; ತನಯ: ಮಗ; ಕೊಡಹಿ: ತಳ್ಳು; ಬಿಸುಟು: ಹೊರಹಾಕು; ಕೊಂದು: ಸಾಯಿಸು; ಅಗಣಿತ: ಅಸಂಖ್ಯಾತ; ಕರಿ: ಆನೆ; ತುರಂಗ: ಕುದುರೆ;

ಪದವಿಂಗಡಣೆ:
ಹಿಡಿಹಿಡಿಯಲ್+ಓಡಿದನು +ದ್ರುಪದನು
ಸಿಡಿದು +ಕೆಲ+ಸಾರಿದನು +ಪವನಜನ್
ಒಡಲ್+ಉಸುರ+ ಸಂಬಂಧವ್+ಅಳಿದುದು +ಸಿಲುಕಿದ್+ಅನಿಬರಿಗೆ
ಒಡೆಮುರಿದು+ ಸಾತ್ಯಕಿಯ+ ರಥವನು
ತುಡುಕಿ +ಹಾಯ್ಕಿತು +ಭೀಮ+ತನಯನ
ಕೊಡಹಿ+ ಬಿಸುಟುದು +ಕೊಂದುದ್+ಅಗಣಿತ +ಕರಿ +ತುರಂಗಮವ

ಅಚ್ಚರಿ:
(೧) ಸಾಯಿಸಿತು ಎಂದು ಹೇಳಲು – ಒಡಲುಸುರ ಸಂಬಂಧವಳಿದುದು ಸಿಲುಕಿದನಿಬರಿಗೆ