ಅವನ ಗುರುತನವೇನು ವಿಪ್ರಾ
ಧಮನಲಾ ಶಸ್ತ್ರೋಪಜೀವನ
ನಿವನು ಋಷಿಯೇ ದ್ರೋಣವಧೆಯನ್ಯಾಯವೇ ತನಗೆ
ಇವನು ತಮ್ಮಯ್ಯನನು ನೆರೆ ಪರಿ
ಭವಿಸನೇ ಚಿಕ್ಕಂದು ನಿಮಗೇ
ಕಿವನನಿರಿದರೆ ಖಾತಿಯೆಂದನು ದ್ರುಪದಸುತ ಮುಳಿದು (ದ್ರೋಣ ಪರ್ವ, ೧೯ ಸಂಧಿ, ೨೩ ಪದ್ಯ)
ತಾತ್ಪರ್ಯ:
ಧೃಷ್ಟದ್ಯುಮ್ನನು ಕೋಪದಿಂದ ಉತ್ತರಿಸುತ್ತಾ, ದ್ರೋಣನ ಗುರುತನವಾದರೂ ಎಂತಹುದು? ಅವನೇನು ಬ್ರಾಹ್ಮಣೋತ್ತಮನೇ? ಶಸ್ತ್ರವಿದ್ಯೆಯಿಂದ ಜೀವಿಸುವ ಇವನು ಬ್ರಾಹ್ಮಣರಲ್ಲಿಯೇ ಅಧಮನು, ಇವನೇನು ಋಷಿಯೇ? ಈ ದ್ರೋಣನನ್ನು ಕಡಿದದ್ದು ಅನ್ಯಾಯವಲ್ಲ. ಚಿಕ್ಕಂದಿನಲ್ಲಿ ಇವನು ನನ್ನ ತಂದೆಯನ್ನು ಅಪಮಾನಿಸಲಿಲ್ಲವೇ? ನಾನಿವನನ್ನು ಇರಿದರೆ ನೀವೇಕೆ ಸಿಟ್ಟಾಗಬೇಕು ಎಂದನು.
ಅರ್ಥ:
ಗುರು: ಆಚಾರ್ಯ; ವಿಪ್ರ: ಬ್ರಾಹ್ಮಣ; ಅಧಮ: ಕೀಳು; ಶಸ್ತ್ರ: ಆಯುಧ; ಉಪಜೀವನ: ಪರಾವಲಂಬಿ ಜೀವನ; ಋಷಿ: ಮುನಿ, ಯೋಗಿ; ವಧೆ: ಸಾವು; ಅನ್ಯಾಯ: ಸಮ್ಮತವಲ್ಲದ; ಅಯ್ಯ: ತಂದೆ; ನೆರೆ: ಗುಂಪು; ಪರಿಭವ: ತಿರಸ್ಕಾರ, ಸೋಲು; ಚಿಕ್ಕಂದು: ಸಣ್ಣ ವಯಸ್ಸು; ಇರಿ: ಚುಚ್ಚು; ಖಾತಿ: ಕೋಪ; ಸುತ: ಮಗ; ಮುಳಿ: ಸಿಟ್ಟು, ಕೋಪ;
ಪದವಿಂಗಡಣೆ:
ಅವನ +ಗುರುತನವೇನು +ವಿಪ್ರ
ಅಧಮನಲಾ +ಶಸ್ತ್ರ+ಉಪಜೀವನನ್
ಇವನು +ಋಷಿಯೇ +ದ್ರೋಣವಧೆ+ಅನ್ಯಾಯವೇ +ತನಗೆ
ಇವನು +ತಮ್ಮ್+ಅಯ್ಯನನು +ನೆರೆ +ಪರಿ
ಭವಿಸನೇ +ಚಿಕ್ಕಂದು +ನಿಮಗೇಕ್
ಇವನನ್+ಇರಿದರೆ +ಖಾತಿಯೆಂದನು +ದ್ರುಪದ+ಸುತ +ಮುಳಿದು
ಅಚ್ಚರಿ:
(೧) ದ್ರೋಣರನ್ನು ಬಯ್ಯುವ ಪರಿ – ವಿಪ್ರಾಧಮನಲಾ ಶಸ್ತ್ರೋಪಜೀವನನಿವನು ಋಷಿಯೇ