ವಿತತ ಸತ್ಯದ ವಿಷಯಭೇದ
ಸ್ಥಿತಿಯನರಿಯದ ಮುನಿಪ ವನಚರ
ತತಿಗೆ ಭೂಸುರಜನದ ಮಾರ್ಗವನರುಹಿದನು ಬಳಿಕ
ಅತಿ ದುರಾತ್ಮಕರವದಿರನಿಬರು
ಕ್ಷಿತಿಸುರರ ಕೊಂದಮಳ ಭೂಪ
ಪ್ರತತಿಯನು ಕೊಂಡೊಯ್ದರೆಲೆ ಕೌಂತೇಯ ಕೇಳೆಂದ (ಕರ್ಣ ಪರ್ವ, ೧೭ ಸಂಧಿ, ೧೫ ಪದ್ಯ)
ತಾತ್ಪರ್ಯ:
ಆ ಕೌಶಿಕ ಮುನಿಯು ಸತ್ಯದ ಸೂಕ್ಷ್ಮವನ್ನರಿಯದೆ ಮುನಿಯು ಬ್ರಾಹ್ಮಣರು ಹೋದ ಮಾರ್ಗವನ್ನು ತೋರಿಸಿದನು. ಆ ದುರಾತ್ಮರು ಬ್ರಾಹ್ಮಣರನ್ನು ಕೊಂದು ಅವರ ಆಭರಣಗಳನ್ನು ತೆಗೆದುಕೊಂಡು ಹೋದರು.
ಅರ್ಥ:
ವಿತತ: ಹರಡಿಕೊಂಡಿರುವ, ವಿಸ್ತಾರವಾದ; ಸತ್ಯ: ದಿಟ; ವಿಷಯ: ಇಂದ್ರಿಯ ಗೋಚರವಾಗುವ ಶಬ್ದ; ಭೇದ: ವ್ಯತ್ಯಾಸ; ಸ್ಥಿತಿ: ರೀತಿ; ಅರಿ: ತಿಳಿ; ಮುನಿ: ಋಷಿ; ವನಚರ: ಬೇಟೆಗಾರ; ತತಿ: ಗುಂಪು; ಭೂಸುರ: ಬ್ರಾಹ್ಮಣ; ಮಾರ್ಗ: ದಾರಿ; ಅರುಹು: ತಿಳಿಸು, ಹೇಳು; ಬಳಿಕ: ನಂತರ; ಅತಿ: ಬಹಳ; ದುರಾತ್ಮ: ದುಷ್ಟ; ಅನಿಬರು: ಅಷ್ಟು ಜನ; ಕ್ಷಿತಿಸುರ: ಬ್ರಾಹ್ಮಣ; ಕೊಂದು: ಸಾಯಿಸು; ಅಮಳ: ಪರಿಶುದ್ಧ; ಭೂಪ: ರಾಜ; ಪ್ರತತಿ: ಗುಂಪು; ಕೊಂಡು: ತೆಗೆದು; ಒಯ್ದು: ಹೋಗು; ಕೇಳು: ಆಲಿಸು; ಕೌಂತೇಯ: ಅರ್ಜುನ;
ಪದವಿಂಗಡಣೆ:
ವಿತತ +ಸತ್ಯದ +ವಿಷಯ+ಭೇದ
ಸ್ಥಿತಿಯನ್+ಅರಿಯದ +ಮುನಿಪ +ವನಚರ
ತತಿಗೆ+ ಭೂಸುರ+ಜನದ +ಮಾರ್ಗವನ್+ಅರುಹಿದನು +ಬಳಿಕ
ಅತಿ +ದುರಾತ್ಮಕರವದಿರ್+ಅನಿಬರು
ಕ್ಷಿತಿಸುರರ+ ಕೊಂದ್+ಅಮಳ +ಭೂಪ
ಪ್ರತತಿಯನು +ಕೊಂಡೊಯ್ದರ್+ಎಲೆ +ಕೌಂತೇಯ +ಕೇಳೆಂದ
ಅಚ್ಚರಿ:
(೧) ತತಿ, ಅತಿ, ಕ್ಷಿತಿ, ಪ್ರತತಿ, ಸ್ಥಿತಿ – ಪ್ರಾಸ ಪದಗಳು
(೨) ಭೂಸುರ, ಕ್ಷಿತಿಸುರ – ಸಮನಾರ್ಥಕ ಪದ
(೩) ಕ ಕಾರದ ತ್ರಿವಳಿ ಪದ – ಕೊಂಡೊಯ್ದರೆಲೆ ಕೌಂತೇಯ ಕೇಳೆಂದ