ಪದ್ಯ ೧೯: ಭೀಮನು ಬೇಟೆಗೆ ಹೇಗೆ ತಯಾರಾದನು?

ಅಂಗಚಿತ್ತವನಿತ್ತನಾ ಶಬ
ರಂಗೆ ಬಲೆಗಳ ತೆಗೆಸಿದನು ಹಸು
ರಂಗಿಯನು ತೊಟ್ಟನು ಚಡಾಳಿಸಿ ಪದದೊಳೆಕ್ಕಡವ
ಸಿಂಗಶರಭವ ನಳವಿಗೊಡಲವ
ರಂಗಳಿಯಲಡುಪಾಯ ಲೌಡಿಯ
ಜಂಗುಳಿಯ ಜೋಡಿಸಿದನಂದು ಜವಾಯ್ಲ ಜಾಯಿಲನ (ಅರಣ್ಯ ಪರ್ವ, ೧೪ ಸಂಧಿ, ೧೯ ಪದ್ಯ)

ತಾತ್ಪರ್ಯ:
ಶಬರನ ಮಾತನ್ನು ಕೇಳಿದ ಭೀಮನು ಅವನಿಗೆ ತನ್ನ ಮೈಮೇಲಿದ್ದ ಹಾರವನ್ನು ಉಡುಗೊರೆಯಾಗಿ ನೀಡಿದನು. ನಾನಾ ವಿಧವಾದ ಬಲೆಗಳನ್ನು ತೆಗೆಸಿದನು. ತಾನೇ ಹಸುರು ಬಣ್ಣದ ಅಂಗಿಯನ್ನು ತೊಟ್ಟು, ಪಾದದಲ್ಲಿ ಎಕ್ಕಡವನ್ನು ಮೆಟ್ಟಿದನು. ಸಿಂಹ, ಶರಭಗಳನ್ನೆದುರಿಸಿ ಅವುಗಳ ಬಾಯಿಗೆ ಅಗುಳಿಯನ್ನು ಹಾಕಲು ವೇಗವಾದ ಬೇಟೆ ನಾಯಿಗಳನ್ನು ಜೋಡಿಸಿದನು.

ಅರ್ಥ:
ಅಂಗ: ದೇಹದ ಭಾಗ; ಅಂಗಚಿತ್ತ: ಉಡುಗೊರೆಯಾಗಿ ತನ್ನ ಮೈ ಮೇಲಿನಿಂದ ತೆಗೆದು ಕೊಡುವ ವಸ್ತ್ರ, ಆಭರಣ ಇತ್ಯಾದಿ; ಇತ್ತನು: ನೀಡು; ಶಬರ: ಬೇಡ; ಬಲೆ: ಜಾಲ; ತೆಗೆಸು: ಹೊರತರು; ಅಂಗಿ: ವಸ್ತ್ರ; ತೊಡು: ಧರಿಸು; ಚಡಾಳಿಸು: ಜೋಡಿಸು; ಪದ: ಚರಣ; ಎಕ್ಕಡ: ಚಪ್ಪಲಿ; ಸಿಂಗ: ಸಿಂಹ; ಶರಭ: ಎಂಟು ಕಾಲುಗಳುಳ್ಳ ಒಂದು ಕಾಲ್ಪನಿಕ ಪ್ರಾಣಿ; ಅಳವಿ: ವಶ; ಅಳಿ: ನಾಶ; ಅಡುಪಾಯ: ಇನ್ನೊಂದು ಉಪಾಯ; ಲೌಡಿ: ಕಬ್ಬಿಣದ ಆಯುಧ; ಜಂಗುಳಿ: ಗುಂಪು; ಜೋಡಿಸು: ಹೊಂದಿಸು; ಜವಾಯ್ಲ: ವೇಗ; ಜಾಯಿಲ: ನಾಯಿ;

ಪದವಿಂಗಡಣೆ:
ಅಂಗಚಿತ್ತವನ್+ಇತ್ತನ್+ಆ+ ಶಬ
ರಂಗೆ +ಬಲೆಗಳ +ತೆಗೆಸಿದನು +ಹಸುರ್
ಅಂಗಿಯನು +ತೊಟ್ಟನು +ಚಡಾಳಿಸಿ +ಪದದೊಳ್+ಎಕ್ಕಡವ
ಸಿಂಗ+ಶರಭವನ್+ಅಳವಿಗೊಡಲ್+ಅವರ್
ಅಂಗಳಿಯಲ್+ಅಡುಪಾಯ +ಲೌಡಿಯ
ಜಂಗುಳಿಯ +ಜೋಡಿಸಿದನ್+ಅಂದು +ಜವಾಯ್ಲ +ಜಾಯಿಲನ

ಅಚ್ಚರಿ:
(೧) ಜ ಕಾರದ ಸಾಲು ಪದ – ಜಂಗುಳಿಯ ಜೋಡಿಸಿದನಂದು ಜವಾಯ್ಲ ಜಾಯಿಲನ

ಪದ್ಯ ೩೧: ಶಿವನು ಅರ್ಜುನನನ್ನು ಹೇಗೆ ತಿವಿದನು?

ಗಾಯವುಂಟೇ ತೋರು ನಿನಗಡು
ಪಾಯೊ ಬಿಡು ಚೊಕ್ಕೆಯವನೆನುತಲ
ಜೇಯನೊಡನಿದಿರೆದ್ದು ತಿವಿದನು ಹರನ ಪೇರುರವ
ಗಾಯ ಘಾತಿಗೆ ನಿಮ್ಮ ಮತವೆಮ
ಗಾಯಿತೆನುತ ಪುರಾರಿ ಕಡು ಪೂ
ರಾಯದಲಿ ಕರವೆತ್ತಿ ನಸು ತಿವಿದನು ಧನಂಜಯನ (ಅರಣ್ಯ ಪರ್ವ, ೭ ಸಂಧಿ, ೩೧ ಪದ್ಯ)

ತಾತ್ಪರ್ಯ:
ನೀನು ನನ್ನನ್ನು ಹೊಡೆಯುವ ಬಗೆಯನ್ನರಿತಿದ್ದರೆ ಅದನ್ನು ತೋರಿಸು, ಈ ಪಟ್ಟುಗಳಿಂದ ನೀನು ಏನೂ ಮಾಡಲಾರೆ ಬಿಡು ಎನ್ನುತ್ತಾ ಅರ್ಜುನನು ಕಿರಾತನ ವಿಶಾಲವಾದ ಎದೆಗೆ ಗುದ್ದಿದನು. ಹಾಗೋ ಹೊಡೆತ ಕೊಡಲು ನೀನು ಹೇಳಿದ್ದೇ ನನ್ನ ಅಭಿಪ್ರಾಯ ಎಂದು ಶಿವನು ಕೈಯನ್ನು ಪೂರಾ ಎತ್ತಿ ಅರ್ಜುನನನ್ನು ಸ್ವಲ್ಪವೇ ತಿವಿದನು.

ಅರ್ಥ:
ಗಾಯ: ಪೆಟ್ಟು; ತೋರು: ಗೋಚರ, ಪ್ರದರ್ಶಿಸು; ಅಡುಪಾಯ: ಮಲ್ಲಯುದ್ಧದ ಒಂದು ವರಸೆ; ಬಿಡು: ತೊರೆ, ತ್ಯಜಿಸು; ಚೊಕ್ಕೆಯ: ಮಲ್ಲಯುದ್ಧದಲ್ಲಿ ಒಂದು ಪಟ್ಟು; ಅಜೇಯ: ಗೆಲ್ಲಲಾಗದವನು; ಇದಿರು: ಎದುರು; ಎದ್ದು: ಮೇಲೇಳು; ತಿವಿ: ಚುಚ್ಚು; ಹರ: ಶಂಕರ; ಉರ: ಎದೆ; ಘಾತಿ: ಹೊಡೆತ; ಮತ: ವಿಚಾರ;ಪುರಾರಿ: ಶಿವ; ಅರಿ: ವೈರಿ; ಕಡು: ಬಹಳ; ಪೂರಾಯ: ಪರಿಪೂರ್ಣ; ಕರ: ಹಸ್ತ; ನಸು: ಸ್ವಲ್ಪ; ತಿವಿ: ಚುಚ್ಚು;

ಪದವಿಂಗಡಣೆ:
ಗಾಯವುಂಟೇ +ತೋರು +ನಿನಗ್+ಅಡು
ಪಾಯೊ +ಬಿಡು +ಚೊಕ್ಕೆಯವನ್+ಎನುತಲ್
ಅಜೇಯನೊಡನ್+ಇದಿರೆದ್ದು+ ತಿವಿದನು +ಹರನ+ ಪೇರ್+ಉರವ
ಗಾಯ +ಘಾತಿಗೆ +ನಿಮ್ಮ +ಮತವ್+ಎಮಗ್
ಆಯಿತೆನುತ +ಪುರಾರಿ +ಕಡು +ಪೂ
ರಾಯದಲಿ +ಕರವೆತ್ತಿ+ ನಸು +ತಿವಿದನು +ಧನಂಜಯನ

ಅಚ್ಚರಿ:
(೧) ಅಡುಪಾಯ, ಚೊಕ್ಕೆಯ – ಮಲ್ಲಯುದ್ಧದ ವರಸೆಗಳು
(೨) ಅಜೇಯ, ಪುರಾರಿ, ಹರ – ಶಿವನನ್ನು ಕರೆದ ಬಗೆ