ಕೇಳಿದನು ಕಡುನೊಂದನಡಿಗಡಿ
ಗಾಲಿ ನೀರೇರಿದವು ಕೈಯಲಿ
ಕೋಲು ಬಿಲು ಸಡಲಿದವು ಸಾಕೀ ದೇಹವೇಕೆನುತ
ಮೇಲು ದುಗುಡದ ಮೊಗದಲವನೀ
ಪಾಲ ಕರ್ಣ ಕೃಪಾದಿ ಭಟರಿಗೆ
ಹೇಳಿದನು ಮಗನಳಿದನಸ್ತ್ರತ್ಯಾಗ ತನಗೆಂದು (ದ್ರೋಣ ಪರ್ವ, ೧೮ ಸಂಧಿ, ೬೭ ಪದ್ಯ)
ತಾತ್ಪರ್ಯ:
ಭೀಮನ ಮಾತುಗಳನ್ನು ಕೇಳಿ ದ್ರೋಣನು ಬಹಳವಾಗಿ ದುಃಖಿತನಾದನು. ಕ್ಷಣ ಕ್ಷಣಕ್ಕೂ ಕಣ್ಣು ನೀರು ಬಂದವು. ಕೈಯಲ್ಲಿದ್ದ ಬಿಲ್ಲು ಬಾಣಗಳ ಹಿಡಿತ ಸಡಲಿತು. ಹೆಚ್ಚಿದ ದುಃಖದಿಂದ ಮುಖವು ಬಾಡಲು ಸುಯೋಧನ ಕರ್ಣ ಕೃಪ ಮೊದಲಾದ ವೀರರಿಗೆ ನನ್ನ ಮಗನು ಸತ್ತನು, ನಾನು ಶಸ್ತ್ರತ್ಯಾಗ ಮಾಡುತ್ತೇನೆ ಎಂದನು.
ಅರ್ಥ:
ಕೇಳು: ಆಲಿಸು; ಕಡುನೊಂದು: ಬಹಳ ವ್ಯಥೆಪಟ್ಟು; ಅಡಿಗಡಿಗೆ: ಹೆಜ್ಜೆ ಹೆಜ್ಜೆಗು; ಆಲಿ: ಕಣ್ಣು; ನೀರು: ಜಲ; ಕೈ: ಹಸ್ತ; ಕೋಲು: ಬಾಣ; ಬಿಲು: ಚಾಪ; ಸಡಲು: ಕಳಚು; ಸಾಕು: ನಿಲ್ಲು, ತಡೆ; ದೇಹ: ಶರೀರ; ದುಗುಡ: ದುಃಖ; ಮೊಗ: ಮುಖ; ಅವನೀಪಾಲ: ರಾಜ; ಭಟ: ಸೈನಿಕ; ಹೇಳು: ತಿಳಿಸು; ಮಗ: ಪುತ್ರ; ಅಳಿ: ಸತ್ತುಹೋಗು; ಅಸ್ತ್ರ: ಶಸ್ತ್ರ; ತ್ಯಾಗ: ಬಿಡು, ತೊರೆ;
ಪದವಿಂಗಡಣೆ:
ಕೇಳಿದನು +ಕಡುನೊಂದನ್+ಅಡಿಗಡಿಗ್
ಆಲಿ +ನೀರೇರಿದವು +ಕೈಯಲಿ
ಕೋಲು +ಬಿಲು +ಸಡಲಿದವು +ಸಾಕೀ +ದೇಹವೇಕೆನುತ
ಮೇಲು +ದುಗುಡದ +ಮೊಗದಲ್+ಅವನೀ
ಪಾಲ +ಕರ್ಣ +ಕೃಪಾದಿ +ಭಟರಿಗೆ
ಹೇಳಿದನು +ಮಗನ್+ಅಳಿದನ್+ಅಸ್ತ್ರತ್ಯಾಗ +ತನಗೆಂದು
ಅಚ್ಚರಿ:
(೧) ದುಃಖದ ಚಿತ್ರಣ – ಆಲಿ ನೀರೇರಿದವು ಕೈಯಲಿ ಕೋಲು ಬಿಲು ಸಡಲಿದವು