ನರನ ಬಾಣಾನೀಕವನು ಕ
ತ್ತರಿಸಿದನು ನಿಜಗದೆಯಲಾತನ
ಧುರಚಮತ್ಕಾರವನು ನೋಡುತ ಪಾರ್ಥ ಬೆರಗಾಗೆ
ಕೆರಳಿ ವಾಘೆಯ ಕೊಂಡು ರಥವನು
ಧುರಕೆ ದುವ್ವಾಳಿಸಲು ಮುರಹರ
ನುರವಣೆಗೆ ಕನಲುತ ಶ್ರುತಾಯುಧ ಹೊಯ್ದನಚ್ಯುತನ (ದ್ರೋಣ ಪರ್ವ, ೧೦ ಸಂಧಿ, ೧೩ ಪದ್ಯ)
ತಾತ್ಪರ್ಯ:
ಶ್ರುತಾಯುಧನು ಅರ್ಜುನನ ಬಾಣಗಳನ್ನು ತನ್ನ ಗದೆಯಿಂದ ಕತ್ತರಿಸಿದನು. ಅವನ ಯುದ್ಧ ಚಾತುರ್ಯವನ್ನು ಕಂಡು ಅರ್ಜುನನು ಬೆರಗಾಗಿ ಬಿಟ್ಟನು. ಶ್ರೀಕೃಷ್ಣನು ಕೆರಳಿ ಕುದುರೆಗಳ ಲಗಾಮನ್ನು ಹಿಡಿದು ಯುದ್ಧಕ್ಕೆ ಮುನ್ನುಗ್ಗಲು, ಶ್ರೀಕೃಷ್ಣನ ರಭಸವನ್ನು ಕಂಡು ಕೋಪಗೊಂಡು ಶ್ರುತಾಯುಧನು ಗದೆಯಿಂದ ಶ್ರೀಕೃಷ್ಣನನ್ನು ಹೊಡೆದನು.
ಅರ್ಥ:
ನರ: ಅರ್ಜುನ; ಬಾಣ: ಸರಳು, ಅಂಬು; ಆನೀಕ: ಗುಂಪು; ಕತ್ತರಿಸು: ತುಂಡು ಮಾಡು; ನಿಜ: ತನ್ನ; ಗದೆ: ಮುದ್ಗರ; ಧುರ: ಯುದ್ಧ, ಕಾಳಗ; ಚಮತ್ಕಾರ: ಸೋಜಿಗ, ವಿಸ್ಮಯ; ನೋಡು: ವೀಕ್ಷಿಸು; ಬೆರಗು: ಆಶ್ಚರ್ಯ; ಕೆರಳು: ಕೋಪಗೊಳ್ಳು; ವಾಘೆ: ಲಗಾಮು; ಕೊಂಡು: ಹಿಡಿದು; ರಥ: ಬಂಡಿ; ಧುರ: ಯುದ್ಧ, ಕಾಳಗ; ದುವ್ವಾಳಿ: ತೀವ್ರಗತಿ; ಮುರಹರ: ಕೃಷ್ಣ; ಉರವಣೆ: ಆತುರ, ಅವಸರ; ಕನಲು: ಸಿಟ್ಟಿಗೇಳು; ಹೊಯ್ದು: ಹೊಡೆ; ಅಚ್ಯುತ: ಕೃಷ್ಣ;
ಪದವಿಂಗಡಣೆ:
ನರನ +ಬಾಣಾನೀಕವನು +ಕ
ತ್ತರಿಸಿದನು +ನಿಜ+ಗದೆಯಲ್+ಆತನ
ಧುರ+ಚಮತ್ಕಾರವನು +ನೋಡುತ +ಪಾರ್ಥ +ಬೆರಗಾಗೆ
ಕೆರಳಿ+ ವಾಘೆಯ +ಕೊಂಡು +ರಥವನು
ಧುರಕೆ +ದುವ್ವಾಳಿಸಲು +ಮುರಹರನ್
ಉರವಣೆಗೆ +ಕನಲುತ +ಶ್ರುತಾಯುಧ +ಹೊಯ್ದನ್+ಅಚ್ಯುತನ
ಅಚ್ಚರಿ:
(೧) ಮುರಹರ, ಅಚ್ಯುತ – ಕೃಷ್ಣನನ್ನು ಕರೆದ ಪರಿ