ಈ ದುರಾತ್ಮರಿಗಗ್ರಜನ ಸಾ
ವೈದದೇ ತಮ್ಮಣ್ಣನಲ್ಲಿಗೆ
ಹೊಯ್ದು ಕಳುಹಲು ಬೇಕಲಾ ಕುನ್ನಿಗಳನೀಕ್ಷಣಕೆ
ಬೈಯ್ದು ಫಲವೇನೆಂದು ಮಾರುತಿ
ಹಾಯ್ದು ಝಂಕಿಸಿ ರುದ್ರಭೂಮಿಯ
ನೆಯಿದನು ಫಡಯೆನುತ ಕೊಂಡನು ಮುರಿದು ಹೆಮ್ಮರನ (ವಿರಾಟ ಪರ್ವ, ೩ ಸಂಧಿ, ೧೦೦ ಪದ್ಯ)
ತಾತ್ಪರ್ಯ:
ಈ ದುರಾತ್ಮರಿಗೆ ಕೀಚಕನಂತೆ ಸಾವೇಕೆ ಬರಬಾರದು! ಈ ಕುನ್ನಿಗಳನ್ನು ಹೊಡೆದು ಈಗಲೇ ಇವರಣ್ಣನ ಬಳಿಗೆ ಕಳಿಸಬೇಕು, ಇವರನ್ನು ಬೈದು ಏನು ಪ್ರಯೋಜನ ಎಂದು ಭೀಮನು ವೇಗವಾಗಿ ನುಗ್ಗಿ ರುದ್ರಭೂಮಿಯನ್ನು ತಲುಪಿ ಅಲ್ಲಿದ್ದ ಒಂದು ದೊಡ್ಡ ಮರವನ್ನು ಮುರಿದು ತನ್ನ ಕೈಯಲ್ಲಿ ಹಿಡಿದನು.
ಅರ್ಥ:
ದುರಾತ್ಮ: ದುಷ್ಟ; ಅಗ್ರಜ: ಅಣ್ಣ; ಸಾವು: ಮರಣ; ಹೊಯ್ದು: ಹೊಡೆ; ಕಳುಹು: ತೆರಳು; ಕುನ್ನಿ: ನಾಯಿ; ಕ್ಷಣ: ನಿಮಿಷ; ಬೈಯ್ದು: ಜರಿ; ಫಲ: ಪ್ರಯೋಜನ; ಮಾರುತಿ: ಭೀಮ; ಹಾಯ್ದು: ಹೊಡೆ; ಝಂಕಿಸು: ಗದರಿಸು; ರುದ್ರಭೂಮಿ: ಸ್ಮಶಾನ; ಎಯ್ದು: ಬರು, ಸೇರು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಪದ; ಕೊಂಡು: ಪಡೆ; ಮುರಿ: ಸೀಳು; ಹೆಮ್ಮರ: ದೊಡ್ಡ ಮರ;
ಪದವಿಂಗಡಣೆ:
ಈ +ದುರಾತ್ಮರಿಗ್+ಅಗ್ರಜನ+ ಸಾವ್
ಐದದೇ +ತಮ್ಮಣ್ಣನಲ್ಲಿಗೆ
ಹೊಯ್ದು +ಕಳುಹಲು +ಬೇಕಲಾ +ಕುನ್ನಿಗಳನ್+ಈಕ್ಷಣಕೆ
ಬೈಯ್ದು +ಫಲವೇನೆಂದು +ಮಾರುತಿ
ಹಾಯ್ದು +ಝಂಕಿಸಿ +ರುದ್ರಭೂಮಿಯನ್
ಎಯ್ದಿದನು+ ಫಡಯೆನುತ +ಕೊಂಡನು +ಮುರಿದು +ಹೆಮ್ಮರನ
ಅಚ್ಚರಿ:
(೧) ಭೀಮನ ಶಕ್ತಿ – ಮಾರುತಿ ಹಾಯ್ದು ಝಂಕಿಸಿ ರುದ್ರಭೂಮಿಯನೆಯಿದನು ಫಡಯೆನುತ ಕೊಂಡನು ಮುರಿದು ಹೆಮ್ಮರನ