ಆಧಿ ಬಿದ್ದುದು ಶಚಿಯ ಮೇಲಣ
ವೇಧೆಯಲಿ ವಿಟಬುದ್ಧಿ ಸಿರಿಗೆ ವಿ
ರೋಧಿಯೈ ಸಲೆ ಸತಿಯುಪಾಯವ ಮಾಡಿ ಋಷಿಗಳಿಗೆ
ಬೋಧಿಸಿದರವರೆನ್ನ ವಾಹನ
ಸಾಧನವೆಯಾದರು ಮುನೀಂದ್ರ ವಿ
ರೋಧವಾಯ್ತೆನಗಲ್ಲಿ ಶಪಿಸಿದನಂದಗಸ್ತ್ಯಮುನಿ (ಅರಣ್ಯ ಪರ್ವ, ೧೪ ಸಂಧಿ, ೬೬ ಪದ್ಯ)
ತಾತ್ಪರ್ಯ:
ನಹುಷನು ಮುಂದುವರೆಸುತ್ತಾ, ಶಚಿಯ ಮೇಲೆ ನನ್ನ ಮನಸ್ಸು ಬಿತ್ತು, ಆ ದುರ್ವ್ಯಸನದಿಂದ ನಾನು ಅವಳನ್ನು ಬೇಡಿದೆ, ಹೆಂಗಸಿನ ಲಂಪಟವು ಐಶ್ವರ್ಯವನ್ನು ನಾಶಗೊಳಿಸುತ್ತದೆ. ಪತಿವ್ರತೆಯಾದ ಶಚೀದೇವಿಯು ಒಂದು ಉಪಾಯವನ್ನು ಮಾಡಿ, ಸಪ್ತಋಷಿಗಳು ಹೊತ್ತ ಪಲ್ಲಕ್ಕಿಯಲ್ಲಿ ಬಂದರೆ ನಿನ್ನನ್ನು ಒಪ್ಪುತ್ತೇನೆ ಎಂದಳು, ಅವಳ ಮಾತಿನಂತೆ ಅವರು ನನ್ನ ಪಲ್ಲಕ್ಕಿಯನ್ನು ಹೊತ್ತರು, ಆಗ ಬ್ರಾಹ್ಮಣನ ವಿರೋಧವು ಬಂದು, ಅಗಸ್ತ್ಯರು ನನ್ನನ್ನು ಶಪಿಸಿದರು.
ಅರ್ಥ:
ಆಧಿ: ಮನೋರೋಗ; ಬಿದ್ದು: ಬೀಳು; ವೇಧೆ: ನೋವು; ವಿಟ: ಸ್ತ್ರೀಲಂಪಟ; ಬುದ್ಧಿ: ಜ್ಞಾನ; ಸಿರಿ: ಐಶ್ವರ್ಯ; ವಿರೋಧಿ: ಹಗೆ; ಸಲೆ: ವಿಶೇಷವಾಗಿ; ಸತಿ: ಹೆಣ್ಣು; ಉಪಾಯ: ನಾಜೂಕು, ಸುಲಭ; ಋಷಿ: ಮುನಿ; ಬೋಧಿಸು: ಹೇಳು; ವಾಹನ: ಪಲ್ಲಕ್ಕಿ, ಗಾಡಿ; ಸಾಧನ: ಸಾಮಗ್ರಿ, ಗುರಿಮುಟ್ಟುವ; ಮುನೀಂದ್ರ: ಋಷಿ; ವಿರೋಧ: ವೈರತ್ವ; ಶಾಪ: ನಿಷ್ಠುರದ ನುಡಿ;
ಪದವಿಂಗಡಣೆ:
ಆಧಿ +ಬಿದ್ದುದು +ಶಚಿಯ +ಮೇಲಣ
ವೇಧೆಯಲಿ +ವಿಟಬುದ್ಧಿ +ಸಿರಿಗೆ +ವಿ
ರೋಧಿಯೈ +ಸಲೆ +ಸತಿ+ಉಪಾಯವ +ಮಾಡಿ +ಋಷಿಗಳಿಗೆ
ಬೋಧಿಸಿದರ್+ಅವರೆನ್ನ+ ವಾಹನ
ಸಾಧನವೆಯಾದರು+ ಮುನೀಂದ್ರ +ವಿ
ರೋಧವಾಯ್ತ+ಎನಗಲ್ಲಿ+ ಶಪಿಸಿದನಂದ್+ಅಗಸ್ತ್ಯ+ಮುನಿ
ಅಚ್ಚರಿ:
(೧) ನಹುಷನ ಬುದ್ಧಿಮಾತು – ವಿಟಬುದ್ಧಿ ಸಿರಿಗೆ ವಿರೋಧಿಯೈ