ತೆಗೆಸು ದಳವನು ಸಾಕು ಬರಿದೇ
ಹೊಗಳುತಿಹೆ ನೀ ನಮ್ಮನೀ ಕಾ
ಳೆಗದೊಳಳಿದುದು ಹಗೆಯೊಳೇಳಕ್ಷೋಹಿಣೀ ಸೇನೆ
ಬಗೆಯದಿರಿದರು ಭೀಮಪಾರ್ಥರು
ಜಗದೊಳದ್ಭುತ ವೀರರಿವರೆಂ
ದಗಧರನು ಪತಿಕರಿಸಿದನು ಪವನಜನ ಫಲುಗುಣನ (ದ್ರೋಣ ಪರ್ವ, ೧೫ ಸಂಧಿ, ೪ ಪದ್ಯ)
ತಾತ್ಪರ್ಯ:
ಎಲೈ ಧರ್ಮಜ ನಿನ್ನ ಸೈನ್ಯವನ್ನು ಪಾಳೆಯಕ್ಕೆ ಕಳಿಸು, ನಮ್ಮನ್ನು ಸುಮ್ಮನೆ ಹೊಗಳುತ್ತಿರುವೆ, ಇಂದಿನ ಕಾಳಗದಲ್ಲಿ ಕೌರವರ ಏಳು ಅಕ್ಷೋಹಿಣಿ ಸೇನೆ ಮಡಿಯಿತು. ಭೀಮಾರ್ಜುನರು ಶತ್ರುಗಳನ್ನು ಲೆಕ್ಕಿಸದೆ ಸಂಹರಿಸಿದರು. ಲೋಕದಲ್ಲಿ ಇವರು ಅದ್ಭುತ ವೀರರು ಎಂದು ಭೀಮಾರ್ಜುನರನ್ನು ಹೊಗಳಿ ಅನುಗ್ರಹಿಸಿದನು.
ಅರ್ಥ:
ತೆಗೆ: ಹೊರತರು, ಕಳಿಸು; ದಳ: ಸೈನ್ಯ; ಸಾಕು: ನಿಲ್ಲಿಸು; ಬರಿ: ಕೇವಲ; ಹೊಗಳು: ಪ್ರಶಂಶಿಸು; ಕಾಳೆಗ: ಯುದ್ಧ; ಇಳಿ: ಕೆಳಕ್ಕೆ ಬಾ; ಹಗೆ: ವೈರಿ; ಅಳಿ: ನಾಶ; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಸೇನೆ: ಸೈನ್ಯ; ಬಗೆ: ತಿಳಿ; ಇರಿ: ಚುಚ್ಚು; ಜಗ: ಪ್ರಪಂಚ; ಅದ್ಭುತ: ಆಶ್ಚರ್ಯ; ವೀರ: ಪರಾಕ್ರಮಿ; ಅಗಧರ: ಬೆಟ್ಟವನ್ನು ಹೊತ್ತವ (ಕೃಷ್ಣ); ಪತಿಕರಿಸು: ಅನುಗ್ರಹಿಸು; ಪವನಜ: ವಾಯುಪುತ್ರ (ಭೀಮ);
ಪದವಿಂಗಡಣೆ:
ತೆಗೆಸು +ದಳವನು +ಸಾಕು +ಬರಿದೇ
ಹೊಗಳುತಿಹೆ +ನೀ +ನಮ್ಮನ್+ಈ+ ಕಾ
ಳೆಗದೊಳ್+ಅಳಿದುದು +ಹಗೆಯೊಳ್+ಏಳ್+ಅಕ್ಷೋಹಿಣೀ +ಸೇನೆ
ಬಗೆಯದ್+ಇರಿದರು +ಭೀಮ+ಪಾರ್ಥರು
ಜಗದೊಳ್+ಅದ್ಭುತ +ವೀರರ್+ಇವರೆಂದ್
ಅಗಧರನು +ಪತಿಕರಿಸಿದನು +ಪವನಜನ +ಫಲುಗುಣನ
ಅಚ್ಚರಿ:
(೧) ಭೀಮಾರ್ಜುನರನ್ನು ಹೊಗಳುವ ಪರಿ – ಭೀಮಪಾರ್ಥರು ಜಗದೊಳದ್ಭುತ ವೀರರಿವರೆಂ
ದಗಧರನು ಪತಿಕರಿಸಿದನು
(೨) ಭೀಮ ಪಾರ್ಥ, ಪವನಜ ಫಲುಗುಣ – ಭೀಮಾರ್ಜುನರನ್ನು ಕರೆದ ಪರಿ