ಪದ್ಯ ೩೪: ಯಾವ ರೀತಿಯ ಕೂಗುಗಳು ಕೇಳಿ ಬಂದವು?

ಹಾ ಮುರಾಂತಕ ಹಾ ಯುಧಿಷ್ಠಿರ
ಹಾ ಮರುತ್ಸುತ ಹಾ ಧನಂಜಯ
ಹಾ ಮಗನೆ ಹಾ ತಂದೆ ಹಾ ಒಡವುಟ್ತಿದನೆಯೆನುತ
ಭೂಮಿ ತೆರೆಯಳೆ ಬಾಯನಕಟಕ
ಟಾ ಮಹೋದಧಿ ದೂರವಿನ್ನೇ
ನೀ ಮಹಾಸ್ತ್ರಕೆ ಸಿಕ್ಕಿದೆವೆಯೆಂದೊರಲಿತರಿಸೇನೆ (ದ್ರೋಣ ಪರ್ವ, ೧೯ ಸಂಧಿ, ೩೪ ಪದ್ಯ)

ತಾತ್ಪರ್ಯ:
ಪಾಂಡವ ಸೈನ್ಯದಲ್ಲಿ ಹಾ ಕೃಷ್ಣಾ, ಹಾ ಯುಧಿಷ್ಠಿರ, ಹಾ ಭೀಮ, ಹಾ ಅರ್ಜುನಾ, ಅಯ್ಯೋ ಅಪ್ಪಾ, ಅಯ್ಯೋ ಅಣ್ಣಾ, ಅಯ್ಯೋ ಮಗನೇ ಎಂಬ ಕೂಗುಗಳು ಕೇಳಿ ಬಂದವು. ಹೋಗಿ ಹೊಕ್ಕೇವೆಂದರೆ ಸಮುದ್ರ ಬಹುದೂರದಲ್ಲಿದೆ, ಭೂಮಿಯಾದರೂ ಬಾಯನ್ನು ಬಿಡಬಾರದೇ? ನಾವೀ ಮಹಾಸ್ತ್ರಕ್ಕೆ ಸಿಕ್ಕು ಹಾಕಿಕೊಂಡೆವು ಎಂಬ ಕೂಗುಗಳು ಕೇಳಿ ಬಂದವು.

ಅರ್ಥ:
ಮುರಾಂತಕ: ಕೃಷ್ಣ; ಮರುತ್ಸುತ: ವಾಯುಪುತ್ರ (ಭೀಮ); ಮಗ: ಸುತ; ತಂದೆ: ಪಿತ; ಒಡವುಟ್ಟು: ಜೊತೆಯಲ್ಲಿ ಹುಟ್ಟಿದ; ಭೂಮಿ: ವಸುಧೆ; ತೆರೆ: ಬಿಚ್ಚುವಿಕೆ; ಅಕಟಕಟ: ಅಯ್ಯೋ; ಮಹೋದಧಿ: ಮಹಾ ಸಾಗರ; ದೂರ: ಅಂತರ; ಮಹಾಸ್ತ್ರ: ಶ್ರೇಷ್ಠವಾದ ಆಯುಧ; ಸಿಕ್ಕು: ಒದಗು; ಬಂಧನ; ಒರಲು: ಅರಚು, ಕೂಗಿಕೊಳ್ಳು; ಅರಿ: ವೈರಿ; ಸೇನೆ: ಸೈನ್ಯ;

ಪದವಿಂಗಡಣೆ:
ಹಾ+ ಮುರಾಂತಕ +ಹಾ +ಯುಧಿಷ್ಠಿರ
ಹಾ +ಮರುತ್ಸುತ +ಹಾ +ಧನಂಜಯ
ಹಾ +ಮಗನೆ +ಹಾ +ತಂದೆ +ಹಾ +ಒಡವುಟ್ಟಿದನೆ+ಎನುತ
ಭೂಮಿ +ತೆರೆಯಳೆ +ಬಾಯನ್+ಅಕಟಕ
ಟಾ +ಮಹೋದಧಿ+ ದೂರವಿನ್ನೇನ್
ಈ ಮಹಾಸ್ತ್ರಕೆ +ಸಿಕ್ಕಿದೆವೆಂದ್+ಒರಲಿತ್+ಅರಿಸೇನೆ

ಅಚ್ಚರಿ:
(೧) ನೋವನ್ನು ಸೂಚಿಸುವ ಹಾ ಪದದ ಬಳಕೆ
(೨) ಸುತ, ಮಗ – ಸಮಾನಾರ್ಥಕ ಪದ
(೩) ಮಹಾಸ್ತ್ರ, ಮಹೋದಧಿ – ಮಹಾ ಪದದ ಬಳಕೆ

ಪದ್ಯ ೩೬: ಶಿವನು ಮರುಗಲು ಕಾರಣವೇನು?

ಗಾಯವನು ಮನ್ನಿಸುತ ಶಿವ ಪೂ
ರಾಯದಲಿ ಮೆಟ್ಟಿದನು ಪಾರ್ಥನ
ಬಾಯೊಳೊಕ್ಕುದು ರುಧಿರ ನಾಸಿಕದೆರಡು ಬಾಹೆಯಲಿ
ನೋಯೆನೊಂದನು ಮೀರಿ ಮುನಿಯಲಿ
ಪಾಯವಾದುದಕಟಕಟಾ ತ
ಪ್ಪಾಯಿತೇ ತಪ್ಪಾಯ್ತೆನುತ ಮರುಗಿದನು ಮದನಾರಿ (ಅರಣ್ಯ ಪರ್ವ, ೭ ಸಂಧಿ, ೩೬ ಪದ್ಯ)

ತಾತ್ಪರ್ಯ:
ಅರ್ಜುನನ ಘಾತದಿಂದ ಆದ ಪೆಟ್ಟನ್ನು ಸೈರಿಸಿ, ಶಿವನು ಅರ್ಜುನನನ್ನು ಪೂರ್ಣ ಶಕ್ತಿಯಿಂದ ಮೆಟ್ಟಿದನು. ಅರ್ಜುನನ ಬಾಯಲ್ಲಿ ಮೂಗಿನ ಎರಡು ಹೊಳ್ಳೆಗಳಲ್ಲಿ ರಕ್ತ ಬಂದಿತು. ಅರ್ಜುನನಿಗೆ ನೋವಾಯಿತೆಂದುಕೊಂಡು ಶಿವನು ಬಹಳವಾಗಿ ನೊಂದನು. ನಾನು ಸ್ವಲ್ಪ ಕೋಪಗೊಂಡುದರಿಂದ ತಪ್ಪಾಯಿತೇ, ನನ್ನಿಂದೇನಾದರೂ ತಪ್ಪಾಯಿತೇ ಎಂದು ಶಿವನು ಮರುಗಿದನು.

ಅರ್ಥ:
ಗಾಯ: ಪೆಟ್ಟು; ಮನ್ನಿಸು: ಒಪ್ಪು, ಅಂಗೀಕರಿಸು; ಶಿವ: ಶಂಕರ; ಪೂರಾಯ: ಪರಿಪೂರ್ಣ; ಮೆಟ್ಟು: ತುಳಿತ; ಬಾಯಿ: ಮುಖದ ಅವಯವ; ಉಕ್ಕು: ಹೊಮ್ಮಿ ಬರು; ರುಧಿರ: ರಕ್ತ; ನಾಸಿಕ: ಮೂಗು; ಬಾಹೆ: ಪಾರ್ಶ್ವ, ಹೊರವಲಯ; ಮೀರು: ಉಲ್ಲಂಘಿಸು; ಮುನಿ: ಸಿಟ್ಟಾಗು, ಕೋಪಗೊಳ್ಳು; ಅಪಾಯ: ಕೇಡು, ತೊಂದರೆ; ಅಕಟಕಟಾ: ಅಯ್ಯೋ; ತಪ್ಪು: ಸುಳ್ಳಾಗು; ಮರುಗು: ತಳಮಳ, ಸಂಕಟ; ಮದನಾರಿ: ಶಿವ, ಮದನ ವೈರಿ;

ಪದವಿಂಗಡಣೆ:
ಗಾಯವನು +ಮನ್ನಿಸುತ +ಶಿವ +ಪೂ
ರಾಯದಲಿ+ ಮೆಟ್ಟಿದನು +ಪಾರ್ಥನ
ಬಾಯೊಳ್+ಉಕ್ಕುದು +ರುಧಿರ +ನಾಸಿಕದ್+ಎರಡು+ ಬಾಹೆಯಲಿ
ನೋಯೆನೊಂದನು +ಮೀರಿ +ಮುನಿಯಲಿ
ಪಾಯವಾದುದ್+ಅಕಟಕಟಾ+ ತ
ಪ್ಪಾಯಿತೇ +ತಪ್ಪಾಯ್ತೆನುತ +ಮರುಗಿದನು +ಮದನಾರಿ

ಅಚ್ಚರಿ:
(೧) ಶಿವನು ದುಃಖಿಸಿದ ಪರಿ – ನೋಯೆನೊಂದನು ಮೀರಿ ಮುನಿಯಲಿ ಪಾಯವಾದುದಕಟಕಟಾ ತಪ್ಪಾಯಿತೇ ತಪ್ಪಾಯ್ತೆನುತ ಮರುಗಿದನು ಮದನಾರಿ