ಪದ್ಯ ೪: ಯುಧಿಷ್ಠಿರನು ಯಾರನ್ನು ಕಂಡನು?

ಎನಲು ಬಂದನು ಭೀಮನಂಬುಜ
ವನವಿದಿರು ಬಂದಂತೆ ಕಂಪಿನ
ತನಿರಸದ ತಾವರೆಯ ತೆಕ್ಕೆಯ ಕೊಳನ ತೋರಿಕೆಯ
ಬೆನುಗು ತುಂಬಿಯ ಜಾಳಿಗೆಯ ತನಿ
ಮಿನುಗು ಮೋರೆಯ ಕಣ್ಣಕೆಂಪಿನ
ಘನ ಭಯಂಕರ ಭೀಮನಿರವನು ಕಂಡನವನೀಶ (ಅರಣ್ಯ ಪರ್ವ, ೧೨ ಸಂಧಿ, ೪ ಪದ್ಯ)

ತಾತ್ಪರ್ಯ:
ಧರ್ಮರಾಯನು ಭೀಮನ ದಾರಿಯನ್ನು ಹಿಡಿದು ನಡೆಯಲು, ಕಮಲವನವೇ ಬಂದಂತೆ, ಭೀಮನು ತಾವರೆಯ ತೆಕ್ಕೆಯನ್ನು ಹೊತ್ತು ಕಮಲ ಸರೋವರವೇ ಬಂದಂತೆ ಬಂದನು, ಕಮಲಗಳಲ್ಲಿ ದುಂಬಿಗಳು ಸುತ್ತಲೂ ಹಾರಿ ಬರುತ್ತಿದ್ದವು, ಮಿನುಗು ಮೋರೆಯ ಕೆಂಗಣ್ಣಿನ ಭಯಂಕರ ಭೀಮನನ್ನು ಯುಧಿಷ್ಠಿರನು ನೋಡಿದನು.

ಅರ್ಥ:
ಅಂಬುಜ: ತಾವರೆ; ಬಂದು: ಆಗಮಿಸು; ಇದಿರು:ಎದುರು; ಕಂಪು: ಸುಗಂಧ; ತನಿ: ವನ: ಕಾಡು; ಸವಿಯಾದುದು; ರಸ: ಸಾರ; ತಾವರೆ: ಕಮಲ; ತೆಕ್ಕೆ: ಗುಂಪು, ಸಮೂಹ; ಕೊಳ: ಸರೋವರ; ತೋರು: ಕಾಣಿಸು; ಜಿನುಗು: ತೊಟ್ಟಿಕ್ಕು; ತುಂಬಿ: ದುಂಬಿ, ಭ್ರಮರ; ಜಾಳಿಗೆ: ಬಲೆ, ಜಾಲ; ಮಿನುಗು: ಹೊಳಪು; ಮೋರೆ: ಮುಖ; ಕಣ್ಣು: ನಯನ; ಕೆಂಪು: ರಕ್ತವರ್ಣ; ಘನ: ಗಟ್ಟಿ, ತೂಕ; ಭಯಂಕರ: ಘೋರವಾದ; ಇರವು: ಇರುವಿಕೆ, ಸ್ಥಿತಿ; ಅವನೀಶ: ರಾಜ; ಕಂಡು: ನೋಡು;

ಪದವಿಂಗಡಣೆ:
ಎನಲು+ ಬಂದನು +ಭೀಮನ್+ಅಂಬುಜ
ವನವ್+ಇದಿರು +ಬಂದಂತೆ +ಕಂಪಿನ
ತನಿ+ರಸದ +ತಾವರೆಯ +ತೆಕ್ಕೆಯ +ಕೊಳನ +ತೋರಿಕೆಯ
ಬೆನುಗು +ತುಂಬಿಯ +ಜಾಳಿಗೆಯ +ತನಿ
ಮಿನುಗು +ಮೋರೆಯ +ಕಣ್ಣ+ಕೆಂಪಿನ
ಘನ +ಭಯಂಕರ +ಭೀಮನ್+ಇರವನು +ಕಂಡನ್+ಅವನೀಶ

ಅಚ್ಚರಿ:
(೧) ಭೀಮನ ವರ್ಣನೆ – ಮಿನುಗು ಮೋರೆಯ ಕಣ್ಣಕೆಂಪಿನ ಘನ ಭಯಂಕರ ಭೀಮ
(೨) ಉಪಮಾನದ ಬಳಕೆ – ಬಂದನು ಭೀಮನಂಬುಜವನವಿದಿರು ಬಂದಂತೆ ಕಂಪಿನ
ತನಿರಸದ ತಾವರೆಯ ತೆಕ್ಕೆಯ ಕೊಳನ ತೋರಿಕೆಯ