ಆ ವಿಮಲಫಲ ನೆಗೆಯಲಾ ಸಹ
ದೇವನಗ್ರಜ ನುಡಿದ ತಪ್ಪದೆ
ಜೀವವಿತ್ತೀ ಧರೆಯಲಭಿಮಾನವನು ರಕ್ಷಿಪುದು
ಭಾವಿಸುವೊಡಧ್ರುವವು ತಾನೀ
ಜೀವವಂಬುಜಮಿತ್ರ ಶಶಿ ತಾ
ರಾವಳಿಗಳುಳ್ಳನ್ನಬರವಭಿಮಾನವಿರುತಿಹುದು (ಅರಣ್ಯ ಪರ್ವ, ೪ ಸಂಧಿ, ೩೧ ಪದ್ಯ)
ತಾತ್ಪರ್ಯ:
ಅರ್ಜುನನ ಮಾತನ್ನು ಕೇಳಿ ಆ ಹಣ್ಣು ಇನ್ನೊಂದು ಮೊಳ ಮೇಲಕ್ಕೆ ಹೋಯಿತು. ನಂತರ ನಕುಲನು ಎದ್ದು ಕೃಷ್ಣನಿಗೆ ಹೇಳುತ್ತಾ, ಪ್ರಾಣವನ್ನು ತ್ಯಜಿಸಿಯಾದರೂ ಆತ್ಮ ಗೌರವವನ್ನು ರಕ್ಷಿಸಿಕೊಳ್ಳಬೇಕು, ಪ್ರಾಣವು ಅಶಾಶ್ವತ, ಮಾನವು ಸೂರ್ಯ ಚಂದ್ರರಿರುವವರೆಗೂ ಉಳಿಯುತ್ತದೆ ಎಂದನು.
ಅರ್ಥ:
ವಿಮಲ: ಶುದ್ಧ; ಫಲ: ಹಣ್ಣು; ನೆಗೆ: ಹಾರು; ಅಗ್ರಜ: ಹಿರಿಯ; ನುಡಿ: ಮಾತಾಡು; ತಪ್ಪದೆ:
ಖಂಡಿತ ಇಲ್ಲ; ಜೀವ: ಪ್ರಾಣ; ಧರೆ: ಭೂಮಿ; ಅಭಿಮಾನ: ಹೆಮ್ಮೆ; ರಕ್ಷಿಸು: ಕಾಪಾಡು; ಭಾವಿಸು: ತಿಳಿ, ಗೊತ್ತುಪಡಿಸಿಕೊಳ್ಳು; ಅಂಬುಜ: ತಾವರೆ; ಮಿತ್ರ: ಸ್ನೇಹಿತ; ಅಂಬುಜಮಿತ್ರ: ಸೂರ್ಯ; ಶಶಿ: ಚಂದ್ರ; ತಾರಾವಳಿ: ನಕ್ಷತ್ರ; ಆವಳಿ: ಗುಂಪು;
ಪದವಿಂಗಡಣೆ:
ಆ +ವಿಮಲಫಲ+ ನೆಗೆಯಲ್+ಆ+ ಸಹ
ದೇವನ್+ಅಗ್ರಜ+ ನುಡಿದ +ತಪ್ಪದೆ
ಜೀವವಿತ್+ಈ+ ಧರೆಯಲ್+ಅಭಿಮಾನವನು +ರಕ್ಷಿಪುದು
ಭಾವಿಸುವೊಡಧ್ರುವವು +ತಾನೀ
ಜೀವವ್+ಅಂಬುಜಮಿತ್ರ +ಶಶಿ +ತಾ
ರಾವಳಿಗಳುಳ್ಳನ್ನಬರವ್+ಅಭಿಮಾನವ್+ಇರುತಿಹುದು
ಅಚ್ಚರಿ:
(೧) ನಕುಲನನ್ನು ಸಹದೇವನಗ್ರಜ; ಸೂರ್ಯನನ್ನು ಅಂಬುಜಮಿತ್ರ ಎಂದು ಕರೆದಿರುವುದು
(೨) ನಕುಲನ ನುಡಿ – ಜೀವವಿತ್ತೀ ಧರೆಯಲಭಿಮಾನವನು ರಕ್ಷಿಪುದು