ಕಲಕಿತರಸನ ಕರಣ ಕಂಗಳ
ಕುಳಿಗಳಲಿ ನೀರೊರೆತವಕಟಕ
ಟೆಲೆಗೆ ಕರೆಯಾ ಪಾಪಿ ಮಗನನು ಕುರುಕುಲಾಂತಕನ
ಸೆಳೆದು ತಂದರು ಕರ್ಣ ಶಕುನಿಗ
ಳಳಲಿಗನ ತೆಗೆದಪ್ಪಿದನು ಕುರು
ತಿಲಕ ನಿನ್ನುಳಿದೊಡಲ ಹೊರೆವೆನೆಯೆಂದನಂಧನೃಪ (ಸಭಾ ಪರ್ವ, ೧೭ ಸಂಧಿ, ೧೫ ಪದ್ಯ)
ತಾತ್ಪರ್ಯ:
ದುರ್ಯೋಧನನು ತನ್ನ ತಂದೆಗೆ ಕರುಣೆ ಬರಲು ಹೊರಹೋಗುವ ನಾಟಕ ಫಲಿಸಿತು, ಧೃತರಾಷ್ಟ್ರನು ಮಗನ ಮಾತುಗಳನ್ನು ಕೇಳಿ, ಅವನ ಮನಸ್ಸು ಕಲಕಿತು, ಕಣ್ಣಿನ ಕುಣಿಗಳಲ್ಲಿ ನೀರು ತುಂಬಿತು, ಅವನು ಗಾಂಧಾರಿಗೆ, ಕರಿಯಾ ಆ ಪಾಪಿ ಮಗನನ್ನು ಕುರುಕುಲಕ್ಕೆ ಯಮನಂತಿರುವವನನ್ನೂ ಎಂದು ಹೇಳಲು, ಕರ್ಣ ಶಕುನಿಗಳು ದುರ್ಯೋಧನನನ್ನು ಕರೆದುಕೊಂಡು ಬಂದರು, ಧೃತರಾಷ್ಟ್ರನು ಅವನನ್ನು ಅಪ್ಪಿಕೊಂಡು ದುಃಖಿಸುತ್ತಾ ಕುರುಕುಲತಿಲಕ ನಿನ್ನನ್ನು ಬಿಟ್ಟು ಈ ದೇಹವನ್ನು ಹೇಗೆ ಹಿಡಿಯಲಿ ಎಂದು ದುಃಖಿಸಿದನು.
ಅರ್ಥ:
ಕಲಕು: ಬೆರಸು; ಅರಸ: ರಾಜ; ಕರಣ: ಕಿವಿ, ಮನಸ್ಸು; ಕಂಗಳು: ನಯನ; ಕುಳಿ:ತಗ್ಗು, ಕುಸಿ; ನೀರು: ಜಲ; ಒರೆ: ಬಳಿ; ಅಕಟಕಟ: ಅಯ್ಯೋ; ಕರೆ: ಬರೆಮಾಡು; ಪಾಪಿ: ದುಷ್ಟ; ಮಗ: ಸುತ; ಕುಲ: ವಂಶ; ಅಂತಕ: ನಾಶಮಾಡುವವ; ಸೆಳೆ: ಎಳೆತ; ಅಳಲು: ಕಣ್ಣೀರಿಡಲು, ದುಃಖಿತನಾಗಿ; ಅಪ್ಪು: ಆಲಿಂಗನ; ತಿಲಕ: ಶ್ರೇಷ್ಠ; ಉಳಿದು: ಬಿಡು, ತೊರೆ; ಒಡಲು: ದೇಹ; ಹೊರೆ: ಪೋಷಿಸು, ಸಲಹು; ಅಂಧ: ಕುರುಡ; ನೃಪ: ರಾಜ;
ಪದವಿಂಗಡಣೆ:
ಕಲಕಿತ್+ಅರಸನ +ಕರಣ +ಕಂಗಳ
ಕುಳಿಗಳಲಿ +ನೀರ್+ಒರೆತವ್+ಅಕಟಕಟ
ಎಲೆಗೆ+ ಕರೆಯಾ +ಪಾಪಿ +ಮಗನನು +ಕುರುಕುಲಾಂತಕನ
ಸೆಳೆದು +ತಂದರು +ಕರ್ಣ +ಶಕುನಿಗಳ್
ಅಳಲಿಗನ+ ತೆಗೆದ್+ಅಪ್ಪಿದನು +ಕುರು
ತಿಲಕ+ ನಿನ್ನುಳಿದ್+ಒಡಲ +ಹೊರೆವೆನೆ+ಎಂದನ್+ಅಂಧನೃಪ
ಅಚ್ಚರಿ:
(೧) ಮಗನನ್ನು ಕರೆದ ಬಗೆ – ಪಾಪಿ ಮಗನನು ಕುರುಕುಲಾಂತಕನ, ಕುರುತಿಲಕ
(೨) ಪುತ್ರಪ್ರೇಮ – ನಿನ್ನುಳಿದೊಡಲ ಹೊರೆವೆನೆಯೆಂದನಂಧನೃಪ