ಏನ ಹೇಳುವೆ ಗಜಘಟಾಪ್ರತಿ
ಮಾನದಲಿ ಕೋದಂಬುಗಳು ಹಿಂ
ಡಾನೆಗಳನೇಳೆಂಟನೊದೆದೋಡಿದವು ಪಂಚಕವ
ಭಾನುರಶ್ಮಿಗಳಂಧಕಾರದ
ಮಾನಗರ್ವವ ಮುರಿವವೊಲು ಗುರು
ಸೂನುವಿನ ಶರ ಸವರಿದವು ಕರಿಘಟೆಯ ಬಲುಮೆಳೆಯ (ಶಲ್ಯ ಪರ್ವ, ೩ ಸಂಧಿ, ೧೫ ಪದ್ಯ)
ತಾತ್ಪರ್ಯ:
ಅಶ್ವತ್ಥಾಮನ ಒಂದು ಬಾಣವು ಏಳೆಂಟು ಆನೆಗಳನ್ನು ಸಂಹರಿಸುತ್ತಿದ್ದವು. ಸೂರ್ಯನ ಕಿರಣಗಳು ಕತ್ತಲೆಯನ್ನು ಮುರಿಯುವಂತೆ ಅಶ್ವತ್ಥಾಮನ ಬಾಣಗಳು ಆನೆಗಳ ಗುಂಪನ್ನು ನಾಶಮಾಡುತ್ತಿದ್ದವು.
ಅರ್ಥ:
ಹೇಳು: ತಿಳಿಸು; ಗಜ: ಆನೆ; ಘಟ: ಗುಮ್ಫು; ಪ್ರತಿಮಾನ: ಸದೃಶವಾದುದು, ಆನೆಯ ದಂತಗಳ ಮಧ್ಯಪ್ರದೇಶ; ಅಂಬು: ಬಾಣ; ಹಿಂಡಾನೆ: ಗುಂಪಿನಲ್ಲಿರುವ ಆನೆ; ಒದೆ: ನೂಕು; ಪಂಚಕ: ಐದು; ಭಾನು: ಸೂರ್ಯ; ರಶ್ಮಿ: ಕಿರಣ; ಅಂಧಕಾರ: ಕತ್ತಲೆ; ಮಾನ:ಅಳತೆ, ಸೇರು, ಅಭಿಮಾನ; ಗರ್ವ: ಅಹಂಕಾರ; ಮುರಿ: ಸೀಳು; ಸೂನು: ಮಗ; ಶರ: ಬಾಣ; ಸವರು: ನಾಶಮಾಡು; ಕರಿಘಟೆ: ಆನೆಯ ಗುಂಪು; ಬಲುಮಳೆ: ಜೋರಾದ ವರ್ಷ;
ಪದವಿಂಗಡಣೆ:
ಏನ +ಹೇಳುವೆ +ಗಜಘಟ+ಅಪ್ರತಿ
ಮಾನದಲಿ+ ಕೋದಂಬುಗಳು+ ಹಿಂ
ಡಾನೆಗಳನ್+ಏಳೆಂಟನ್+ಒದೆದ್+ಓಡಿದವು +ಪಂಚಕವ
ಭಾನು+ರಶ್ಮಿಗಳ್+ಅಂಧಕಾರದ
ಮಾನ+ಗರ್ವವ +ಮುರಿವವೊಲು +ಗುರು
ಸೂನುವಿನ +ಶರ +ಸವರಿದವು +ಕರಿಘಟೆಯ +ಬಲುಮೆಳೆಯ
ಅಚ್ಚರಿ:
(೧) ಗಜಘಟ, ಕರಿಘಟೆ, ಹಿಂಡಾನೆ – ಸಾಮ್ಯಾರ್ಥ ಪದ
(೨) ಉಪಮಾನದ ಪ್ರಯೋಗ – ಭಾನುರಶ್ಮಿಗಳಂಧಕಾರದಮಾನಗರ್ವವ ಮುರಿವವೊಲು
(೩) ೪ ಸಾಲು ಒಂದೇ ಪದವಾಗಿ ರಚಿತವಾದುದು – ಭಾನುರಶ್ಮಿಗಳಂಧಕಾರದ