ಲಾಯದಲಿ ಹೊಕ್ಕಿರಿದು ಕುದುರೆಯ
ಬೀಯ ಮಾಡಿದನಂತಕಂಗೆಯ
ಡಾಯುಧದ ಧಾರೆಯಲಿ ಕೊಟ್ಟನು ಕುಂಜರವ್ರಜವ
ರಾಯದಳ ಧರೆಯಂತೆ ನವಖಂ
ಡಾಯಮಾನವಿದಾಯ್ತು ಪಾಂಡವ
ರಾಯ ಕಟಕವ ಕೊಂದನಶ್ವತ್ಥಾಮ ಬೇಸರದೆ (ಗದಾ ಪರ್ವ, ೯ ಸಂಧಿ, ೩೯ ಪದ್ಯ)
ತಾತ್ಪರ್ಯ:
ಅಶ್ವತ್ಥಾಮನು ಲಾಯವನ್ನು ಹೊಕ್ಕು ಆನೆ ಕುದುರೆಗಳನ್ನು ಕೊಚ್ಚಿ ಕೊಂದನು. ಭೂಮಿಯು ಒಂಬತ್ತು ಖಂಡಗಳಿಂದ ಕೂಡಿದಂತೆ ಪಾಂಡವ ಸೇನೆಯು ನವ ಖಂಡಮಯವಾಯಿತು. ಬೇಸರವಿಲ್ಲದೆ ಅಶ್ವತ್ಥಾಮನು ಸೇನೆಯನ್ನು ಕೊಂದನು.
ಅರ್ಥ:
ಲಾಯ: ಅಶ್ವಶಾಲೆ; ಹೊಕ್ಕು: ಸೇರು; ಕುದುರೆ: ಅಶ್ವ; ಬೀಯ: ವ್ಯಯ, ಖರ್ಚು; ಅಂತಕ: ಯಮ; ಆಯುಧ: ಶಸ್ತ್ರ; ಧಾರೆ: ವರ್ಷ; ಕೊಡು: ನೀಡು; ಕುಂಜರ: ಆನೆ; ವ್ರಜ: ಗುಂಪು; ರಾಯ: ರಾಜ; ದಳ: ಸೈನ್ಯ; ಧರೆ: ಭೂಮಿ; ನವ: ಹೊಸ; ಖಂಡ: ಮಾಂಸ; ಕಟಕ: ಸೈನ್ಯ; ಕೊಂದು: ಕೊಲ್ಲು; ಬೇಸರ: ನೋವು;
ಪದವಿಂಗಡಣೆ:
ಲಾಯದಲಿ +ಹೊಕ್ಕಿರಿದು +ಕುದುರೆಯ
ಬೀಯ +ಮಾಡಿದನ್+ಅಂತಕಂಗೆ+
ಅಡಾಯುಧದ +ಧಾರೆಯಲಿ +ಕೊಟ್ಟನು+ ಕುಂಜರ+ವ್ರಜವ
ರಾಯದಳ +ಧರೆಯಂತೆ+ ನವ+ಖಂಡ
ಆಯಮಾನವಿದಾಯ್ತು +ಪಾಂಡವ
ರಾಯ +ಕಟಕವ +ಕೊಂದನ್+ಅಶ್ವತ್ಥಾಮ +ಬೇಸರದೆ
ಅಚ್ಚರಿ:
(೧) ಲಾಯ, ಬೀಯ, ರಾಯ – ಪ್ರಾಸ ಪದಗಳು
(೨) ಸಾಯಿಸಿದನು ಎಂದು ಹೇಳುವ ಪರಿ – ಅಂತಕಂಗೆಯಡಾಯುಧದ ಧಾರೆಯಲಿ ಕೊಟ್ಟನು ಕುಂಜರವ್ರಜವ