ಪದ್ಯ ೧: ಯುಧಿಷ್ಠಿರನೇಕೆ ಆಶ್ಚರ್ಯಗೊಂಡನು?

ಕೇಳು ಜನಮೇಜಯ ಯುಧಿಷ್ಠಿರ
ನೋಲಗದೊಳುತ್ಪಾತ ಶತವಿವ
ರಾಲಿಗಳನಂಜಿಸಿದುವತಿರಂಜಿಸಿದುವದ್ಭುತವ
ಕೇಳಿದನಿದೇನೆಂದು ವರವಿ
ಪ್ರಾಳಿಯನು ಧೌಮ್ಯಾದಿ ಋಷಿಗಳು
ಹೇಳಿದರು ತಚ್ಛಕುನಸಂಗತಿಗಳ ಫಲೋತ್ತರವ (ಅರಣ್ಯ ಪರ್ವ, ೧೨ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಯುಧಿಷ್ಠಿರನ ಓಲಗದಲ್ಲಿ ನೂರಕ್ಕೂ ಹೆಚ್ಚು ಉತ್ಪಾತಕಗಳು ಕಾಣಿಸಿಕೊಂಡು ಕಣ್ಣಿಗೆ ಭಯವನ್ನುಂಟುಮಾಡಿ ಅದ್ಭುತವನ್ನು ತೋರ್ಪಡಿಸಿದವು, ಇವುಗಳನ್ನು ನೋಡಿದ ಯುಧಿಷ್ಠಿರನು ಅಲ್ಲಿ ನೆರೆದಿದ್ದ ಬ್ರಾಹ್ಮಣ ಶ್ರೇಷ್ಠರನ್ನು ಕೇಳಲು, ಧೌಮ್ಯಾದಿಗಳು ಆ ಶಕುನಗಳ ಫಲವನ್ನು ತಿಳಿಸಿದರು.

ಅರ್ಥ:
ಕೇಳು: ಆಲಿಸು; ಓಲಗ: ದರ್ಬಾರು; ಉತ್ಪಾತ: ಆಕಸ್ಮಿಕವಾದ ಘಟನೆ; ಶತ: ನೂರು; ಆಲಿ: ಕಣ್ಣು; ಅಂಜಿಸು: ಹೆದರು; ಅತಿ: ಬಹಳ; ರಂಜಿಸು: ಹೊಳೆ, ಪ್ರಕಾಶಿಸು; ಅದ್ಭುತ: ಆಶ್ಚರ್ಯ; ವರ: ಶ್ರೇಷ್ಠ; ವಿಪ್ರಾಳಿ: ಬ್ರಹ್ಮಣರ ಸಮೂಹ; ಆದಿ: ಮುಂತಾದ; ಋಷಿ: ಮುನಿ; ಹೇಳು: ತಿಳಿಸು; ಸಂಗತಿ: ವಿವರ; ಫಲ: ಪ್ರಯೋಜನ; ಉತ್ತರ: ಅಭಿವೃದ್ಧಿ;

ಪದವಿಂಗಡಣೆ:
ಕೇಳು +ಜನಮೇಜಯ +ಯುಧಿಷ್ಠಿರನ್
ಓಲಗದೊಳ್+ಉತ್ಪಾತ +ಶತವ್+ಇವರ್
ಆಲಿಗಳ್+ಅಂಜಿಸಿದುವ್+ಅತಿ+ರಂಜಿಸಿದುವ್+ಅದ್ಭುತವ
ಕೇಳಿದನ್+ಇದೇನೆಂದು +ವರ+ವಿ
ಪ್ರಾಳಿಯನು +ಧೌಮ್ಯಾದಿ +ಋಷಿಗಳು
ಹೇಳಿದರು +ತತ್ ಶಕುನ+ಸಂಗತಿಗಳ +ಫಲೋತ್ತರವ

ಅಚ್ಚರಿ:
(೧) ೩ ಸಾಲು ಒಂದೇ ಪದವಾಗಿ ರಚಿಸಿದುದು – ರಾಲಿಗಳನಂಜಿಸಿದುವತಿರಂಜಿಸಿದುವದ್ಭುತವ
(೨) ಕೇಳಿ, ವಿಪ್ರಾಳಿ, ಹೇಳಿ – ಪ್ರಾಸ ಪದಗಳು

ಪದ್ಯ ೪೨: ಕೌರವನ ಆಸ್ಥಾನ ಹೇಗೆ ಕಾಣಿಸಿತು?

ಅತಿಮುದದಿ ತನು ಸೊಕ್ಕಿದೈರಾ
ವತವ ಕಿವಿವಿಡಿದೆಳೆವ ದಿಗ್ಗಜ
ತತಿಯನಮಳಾಂಕುಶದಲಂಜಿಸಿ ಕೆಲಬಲಕೆ ಬಿಡುವ
ನುತ ಗಜಾರೋಹಕರು ಕುರುಭೂ
ಪತಿಯ ಹೊರೆಯಲಿ ಮೆರೆದರಮರಾ
ವತಿಯ ರಾಯನ ಸಭೆಯೊಲೆಸೆದುದು ಕೌರವಾಸ್ಥಾನ (ಉದ್ಯೋಗ ಪರ್ವ, ೮ ಸಂಧಿ, ೪೨ ಪದ್ಯ)

ತಾತ್ಪರ್ಯ:
ಸೊಕ್ಕಿದ ದೇಹದಿಂದ ಕೂಡಿದ, ಅತಿ ಸಂತಸದಿಂದ ಲೀಲಾಜಾಲವಾಗಿ ಆನೆಗಳ ಕಿವಿಹಿಡಿದು ಎಳೆದು ಅಂಕುಶದಿಂದ ಅಂಜಿಸಿ ಅಕ್ಕಪಕ್ಕಕ್ಕೆ ಬಿಡುವ ಪಳಿಗಿದ ಶ್ರೇಷ್ಠ ಮಾವುತರು ದುರ್ಯೋಧನನ ಆಜ್ಞೆಯಲ್ಲಿ ಮೆರೆಯಲು ನೋಡುವವರಿಗೆ ಇಂದ್ರನ ಸಭೆಯೇ ಧರೆಗೆ ಕೌರವನ ಆಸ್ಥಾನವಾಗಿದಿಯೇ ಎಂದು ತೋರುತ್ತಿತ್ತು.

ಅರ್ಥ:
ಅತಿ: ತುಂಬ; ಮುದ: ಸಂತೋಷ; ತನು: ದೇಹ; ಸೊಕ್ಕು: ಅಮಲು, ಮದ; ಐರಾವತ: ಇಂದ್ರನ ಆನೆ; ಕಿವಿ: ಶ್ರವಣಸಾಧನವಾದ ಅವಯವ; ಎಳೆ: ಜಗ್ಗು; ದಿಗ್ಗಜ: ಅತಿಶ್ರೇಷ್ಠ;
ಭೂಭಾಗವನ್ನು ಹೊತ್ತಿರುವ ಎಂಟು ದಿಕ್ಕಿನ ಆನೆಗಳು; ತತಿ: ಗುಂಪು; ಅಮಳ: ನಿರ್ಮಲ; ಅಂಕುಶ: ಆನೆಯನ್ನು ಹದ್ದಿನಲ್ಲಿ ಇಡಲು ಉಪಯೋಗಿಸುವ ಒಂದು ಸಾಧನ; ಅಂಜಿಸು: ಹೆದರಿಸು; ಕೆಲಬಲ: ಅಕ್ಕಪಕ್ಕ; ಬಿಡು: ತೊರೆ, ತ್ಯಜಿಸು; ನುತ: ಶ್ರೇಷ್ಠವಾದ; ಗಜ: ಆನೆ, ಕರಿ; ಆರೋಹಕ: ಹತ್ತುವವ; ಗಜಾರೋಹಕ: ಮಾವುತ; ಭೂಪತಿ: ರಾಜ; ಹೊರೆ: ಭಾರ; ಮೆರೆ: ಪ್ರಕಾಶಿಸು; ಅಮರಾವತಿ: ಇಂದ್ರನ ನಗರ; ರಾಯ: ರಾಜ; ಸಭೆ: ದರ್ಬಾರು; ಎಸೆ: ಶೋಭಿಸು; ಆಸ್ಥಾನ: ದರಬಾರು;

ಪದವಿಂಗಡಣೆ:
ಅತಿಮುದದಿ +ತನು +ಸೊಕ್ಕಿದ್+ಐರಾ
ವತವ +ಕಿವಿವಿಡಿದ್+ಎಳೆವ +ದಿಗ್ಗಜ
ತತಿಯನ್+ಅಮಳ+ಅಂಕುಶದಲ್+ಅಂಜಿಸಿ +ಕೆಲಬಲಕೆ +ಬಿಡುವ
ನುತ +ಗಜ+ಆರೋಹಕರು+ ಕುರುಭೂ
ಪತಿಯ +ಹೊರೆಯಲಿ +ಮೆರೆದರ್+ಅಮರಾ
ವತಿಯ +ರಾಯನ +ಸಭೆಯೊಲ್+ಎಸೆದುದು +ಕೌರವಾಸ್ಥಾನ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕುರುಭೂಪತಿಯ ಹೊರೆಯಲಿ ಮೆರೆದರಮರಾವತಿಯ ರಾಯನ ಸಭೆಯೊಲೆಸೆದುದು ಕೌರವಾಸ್ಥಾನ
(೨) ‘ಅ’ ಕಾರದ ಪದ ಬಳಕೆ – ಅಮಳ, ಅಂಕುಶ, ಅಂಜಿಸಿ, ಅಮರಾವತಿ, ಅತಿ