ಕೇಳು ಜನಮೇಜಯ ಯುಧಿಷ್ಠಿರ
ನೋಲಗದೊಳುತ್ಪಾತ ಶತವಿವ
ರಾಲಿಗಳನಂಜಿಸಿದುವತಿರಂಜಿಸಿದುವದ್ಭುತವ
ಕೇಳಿದನಿದೇನೆಂದು ವರವಿ
ಪ್ರಾಳಿಯನು ಧೌಮ್ಯಾದಿ ಋಷಿಗಳು
ಹೇಳಿದರು ತಚ್ಛಕುನಸಂಗತಿಗಳ ಫಲೋತ್ತರವ (ಅರಣ್ಯ ಪರ್ವ, ೧೨ ಸಂಧಿ, ೧ ಪದ್ಯ)
ತಾತ್ಪರ್ಯ:
ಜನಮೇಜಯ ರಾಜ ಕೇಳು, ಯುಧಿಷ್ಠಿರನ ಓಲಗದಲ್ಲಿ ನೂರಕ್ಕೂ ಹೆಚ್ಚು ಉತ್ಪಾತಕಗಳು ಕಾಣಿಸಿಕೊಂಡು ಕಣ್ಣಿಗೆ ಭಯವನ್ನುಂಟುಮಾಡಿ ಅದ್ಭುತವನ್ನು ತೋರ್ಪಡಿಸಿದವು, ಇವುಗಳನ್ನು ನೋಡಿದ ಯುಧಿಷ್ಠಿರನು ಅಲ್ಲಿ ನೆರೆದಿದ್ದ ಬ್ರಾಹ್ಮಣ ಶ್ರೇಷ್ಠರನ್ನು ಕೇಳಲು, ಧೌಮ್ಯಾದಿಗಳು ಆ ಶಕುನಗಳ ಫಲವನ್ನು ತಿಳಿಸಿದರು.
ಅರ್ಥ:
ಕೇಳು: ಆಲಿಸು; ಓಲಗ: ದರ್ಬಾರು; ಉತ್ಪಾತ: ಆಕಸ್ಮಿಕವಾದ ಘಟನೆ; ಶತ: ನೂರು; ಆಲಿ: ಕಣ್ಣು; ಅಂಜಿಸು: ಹೆದರು; ಅತಿ: ಬಹಳ; ರಂಜಿಸು: ಹೊಳೆ, ಪ್ರಕಾಶಿಸು; ಅದ್ಭುತ: ಆಶ್ಚರ್ಯ; ವರ: ಶ್ರೇಷ್ಠ; ವಿಪ್ರಾಳಿ: ಬ್ರಹ್ಮಣರ ಸಮೂಹ; ಆದಿ: ಮುಂತಾದ; ಋಷಿ: ಮುನಿ; ಹೇಳು: ತಿಳಿಸು; ಸಂಗತಿ: ವಿವರ; ಫಲ: ಪ್ರಯೋಜನ; ಉತ್ತರ: ಅಭಿವೃದ್ಧಿ;
ಪದವಿಂಗಡಣೆ:
ಕೇಳು +ಜನಮೇಜಯ +ಯುಧಿಷ್ಠಿರನ್
ಓಲಗದೊಳ್+ಉತ್ಪಾತ +ಶತವ್+ಇವರ್
ಆಲಿಗಳ್+ಅಂಜಿಸಿದುವ್+ಅತಿ+ರಂಜಿಸಿದುವ್+ಅದ್ಭುತವ
ಕೇಳಿದನ್+ಇದೇನೆಂದು +ವರ+ವಿ
ಪ್ರಾಳಿಯನು +ಧೌಮ್ಯಾದಿ +ಋಷಿಗಳು
ಹೇಳಿದರು +ತತ್ ಶಕುನ+ಸಂಗತಿಗಳ +ಫಲೋತ್ತರವ
ಅಚ್ಚರಿ:
(೧) ೩ ಸಾಲು ಒಂದೇ ಪದವಾಗಿ ರಚಿಸಿದುದು – ರಾಲಿಗಳನಂಜಿಸಿದುವತಿರಂಜಿಸಿದುವದ್ಭುತವ
(೨) ಕೇಳಿ, ವಿಪ್ರಾಳಿ, ಹೇಳಿ – ಪ್ರಾಸ ಪದಗಳು