ವಾಯಕಂಜದಿರಂಜದಿರಿ ಫಡ
ಬಾಯ ಬಿಟ್ಟರೆ ಹೋಹುದೇ ನಿ
ಮ್ಮಾಯುಷಕೆ ಹೊಣೆ ತಾನು ಹೇಳಿತ ಮಾಡಿ ಬೇಗದಲಿ
ಆಯುಧಂಗಳ ಬಿಸುಟು ಕರಿ ರಥ
ಜಾಯಿಲಂಗಳನಿಳಿದು ಬದುಕುವು
ಪಾಯವೆಂದಸುರಾರಿ ಸಾರಿದನಂದು ಕೈ ನೆಗಹಿ (ದ್ರೋಣ ಪರ್ವ, ೧೯ ಸಂಧಿ, ೩೭ ಪದ್ಯ)
ತಾತ್ಪರ್ಯ:
ಶ್ರೀಕೃಷ್ಣನು ಕೈಯೆತ್ತಿ, ಈ ಉರಿ ಹೊಗೆಗಳಿಗೆ ಮೋಸ ಹೋಗಬೇಡಿರಿ, ಬಾಯಿಬಿಟ್ಟು ಹಲುಬಿದರೆ ಇದು ಹೋಗುವುದಿಲ್ಲ. ನಿಮ್ಮ ಆಯುಷ್ಯಕ್ಕೆ ನಾನು ಜವಾಬ್ದಾರಿ ಹೊತ್ತಿದ್ದೇನೆ. ಹೇಳುವುದನ್ನು ಕೂಡಲೇ ಮಾಡಿರಿ, ಆಯುಧಗಳನ್ನು ಬಿಸುಡಿರಿ. ಆನೆ, ಕುದುರೆ ರಥಗಳಿಂದ ಇಳಿದುಬಿಡಿ. ಬದುಕಲು ಇರುವುದಿದೊಂದೇ ಉಪಾಯ ಎಂದು ಘೋಷಿಸಿದನು.
ಅರ್ಥ:
ವಾಯ: ಮೋಸ, ಕಪಟ, ಕಾರಣ; ಅಂಜು: ಹೆದರು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಬಿಡು: ಅಗಲಿಸು; ಹೋಹು: ತೆರಳು; ಆಯುಷ: ಜೀವಿತಾವಧಿ; ಹೊಣೆ: ಜವಾಬ್ದಾರಿ; ಹೇಳು: ತಿಳಿಸು; ಬೇಗ: ಶೀಘ್ರ; ಆಯುಧ: ಶಸ್ತ್ರ; ಬಿಸುಟು: ಹೊರಹಾಕು; ಕರಿ: ಆನೆ; ರಥ: ಬಂಡಿ; ಇಳಿ: ಕೆಳಕ್ಕೆ ನಡೆ; ಬದುಕು: ಜೀವಿಸು; ಉಪಾಯ: ಯುಕ್ತಿ, ಹಂಚಿಕೆ; ಅಸುರಾರಿ: ಕೃಷ್ಣ; ಸಾರು: ತಿಳಿಸು; ಕೈ: ಹಸ್ತ; ನೆಗಹು: ಮೇಲೆತ್ತು;
ಪದವಿಂಗಡಣೆ:
ವಾಯಕ್+ಅಂಜದಿರ್+ಅಂಜದಿರಿ+ ಫಡ
ಬಾಯ +ಬಿಟ್ಟರೆ +ಹೋಹುದೇ +ನಿಮ್ಮ್
ಆಯುಷಕೆ+ ಹೊಣೆ+ ತಾನು +ಹೇಳಿತ +ಮಾಡಿ +ಬೇಗದಲಿ
ಆಯುಧಂಗಳ +ಬಿಸುಟು +ಕರಿ+ ರಥ
ಜಾಯಿಲಂಗಳನ್+ಇಳಿದು +ಬದುಕು
ಉಪಾಯವೆಂದ್+ಅಸುರಾರಿ +ಸಾರಿದನ್+ಅಂದು +ಕೈ +ನೆಗಹಿ
ಅಚ್ಚರಿ:
(೧) ಕೃಷ್ಣನ ಅಭಯ ವಾಣಿ – ನಿಮ್ಮಾಯುಷಕೆ ಹೊಣೆ ತಾನು
(೨) ವಾಯ, ಬಾಯ, ಉಪಾಯ – ಪ್ರಾಸ ಪದಗಳು