ಪದ್ಯ ೧೯: ಹಸ್ತಿನಾಪುರಿಗೆ ಹೆಸರು ಹೇಗೆ ಬಂದಿತು?

ಭರತನಾ ದುಷ್ಯಂತನಿಂದವ
ತರಿಸಿದನು ತತ್ಪೂರ್ವ ನೃಪರಿಂ
ಹಿರಿದು ಸಂದನು ಬಳಿಕ ಭಾರತ ವಂಶವಾಯ್ತಲ್ಲಿ
ಭರತಸೂನು ಸುಹೋತ್ರನಾತನ
ವರ ಕುಮಾರಕ ಹಸ್ತಿ ಹಸ್ತಿನ
ಪುರಿಗೆ ಹೆಸರಾಯ್ತಾತನಿಂದವೆ ನೃಪತಿ ಕೇಳೆಂದ (ಆದಿ ಪರ್ವ, ೨ ಸಂಧಿ, ೧೯ ಪದ್ಯ)

ತಾತ್ಪರ್ಯ:
ದುಷ್ಯಂತನ ಮಗನು ಭರತ, ಅವನು ತನ್ನ ಪೂರ್ವಜರಿಗಿಂತ ಹಿರಿದಾಗಿ ಬಾಳಿದನು. ಅವನ ವಮ್ಶಕ್ಕೆ ಭಾರತವಂಶವೆಂದು ಹೆಸರಾಯ್ತು. ಭರತನ ಮಗನು ಸುಹೋತ್ರ, ಅವನ ಮಗನು ಹಸ್ತಿ, ಚಂದ್ರವಂಶದ ಅರಸರ ರಾಜಧಾನಿಯಾಗಿ ಹಸ್ತಿಯಿಂದ ಹಸ್ತಿನಾಪುರಿ ಎಂಬ ಹೆಸರು ಬಂದಿತು.

ಅರ್ಥ:
ಅವತರಿಸು: ಹುಟ್ಟು; ಪೂರ್ವ: ಹಿಂದಿನ; ನೃಪ: ರಾಜ; ಹಿರಿದು: ದೊಡ್ಡ; ಸಂದ: ಕಳೆದ, ಹಿಂದಿನ; ಬಳಿಕ: ನಂತರ; ವಂಶ: ಕುಲ; ಸೂನು: ಮಗ; ವರ: ಶ್ರೇಷ್ಠ; ಕುಮಾರ: ಮಗ; ಹೆಸರು: ನಾಮ; ಕೇಳು: ಆಲಿಸು;

ಪದವಿಂಗಡಣೆ:
ಭರತನ್+ಆ+ ದುಷ್ಯಂತನಿಂದ್+ಅವ
ತರಿಸಿದನು +ತತ್ಪೂರ್ವ+ ನೃಪರಿಂ
ಹಿರಿದು +ಸಂದನು +ಬಳಿಕ +ಭಾರತ +ವಂಶವಾಯ್ತಲ್ಲಿ
ಭರತಸೂನು +ಸುಹೋತ್ರನ್+ಆತನ
ವರ+ ಕುಮಾರಕ +ಹಸ್ತಿ+ ಹಸ್ತಿನ
ಪುರಿಗೆ+ ಹೆಸರಾಯ್ತ್+ಆತನಿಂದವೆ +ನೃಪತಿ+ ಕೇಳೆಂದ

ಅಚ್ಚರಿ:
(೧) ಸೂನು, ಕುಮಾರ – ಸಮಾನಾರ್ಥಕ ಪದ
(೨) ಹ ಕಾರದ ತ್ರಿವಳಿ ಪದ – ಹಸ್ತಿ ಹಸ್ತಿನಪುರಿಗೆ ಹೆಸರಾಯ್ತಾತನಿಂದವೆ

ನಿಮ್ಮ ಟಿಪ್ಪಣಿ ಬರೆಯಿರಿ