ಪದ್ಯ ೯: ಯಾರು ಯಾರ ಮನೆಯನ್ನು ಸೇರಿದರು?

ಆ ಸುಯೋಧನನರಮನೆಯನವ
ನೀಶ ಹೊಕ್ಕನು ಪವನಸುತ ದು
ಶ್ಯಾಸನನ ಸದನವನು ಪಾರ್ಥಗೆ ಕರ್ಣಭವನದಲಿ
ವಾಸವಾದುದು ಯಮಳರಿಗೆ ದು
ಶ್ಯಾಸನಾನುಜರರಮನೆಗಳುಳಿ
ದೈಸುಮನೆ ಭಂಡಾರವಾದುದು ಭೂಪ ಕೇಳೆಂದ (ಗದಾ ಪರ್ವ, ೧೩ ಸಂಧಿ, ೯ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಯುಧಿಷ್ಠಿರನು ಸುಯೋಧನನ ಅರಮನೆಯನ್ನು ಹೊಕ್ಕನು, ಭೀಮನು ದುಶ್ಯಾಸನನ ಮನೆಯನ್ನೂ, ಅರ್ಜುನನು ಕರ್ಣನ ಭವನವನ್ನು, ನಕುಲಸಹದೇವರು ದುಶ್ಯಾಸನನಿಗಿಂದ ಚಿಕ್ಕವರಾದ ಕೌರವರ ಮನೆಗಳನ್ನು ಹೊಕ್ಕರು. ಉಳಿದೆಲ್ಲ ಅರಮನೆಗಳೂ ಭಂಡಾರ ಭವನಗಳಾದವು.

ಅರ್ಥ:
ಅರಮನೆ: ರಾಜರ ಆಲಯ; ಅವನೀಶ: ರಾಜ; ಹೊಕ್ಕು: ಸೇರು; ಪವನಸುತ: ಭೀಮ; ಪವನ: ಗಾಳಿ, ವಾಯು; ಸುತ: ಮಗ; ಸದನ: ಆಲಯ; ಭವನ: ಆಲಯ; ವಾಸ: ಜೀವಿಸು; ಯಮಳ: ಜೋಡಿ ಮಕ್ಕಳು, ಅವಳಿ; ಅನುಜ: ತಮ್ಮ; ಉಳಿದ: ಮಿಕ್ಕ; ಐಸು: ಎಲ್ಲ; ಭಂಡಾರ: ಬೊಕ್ಕಸ, ಖಜಾನೆ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಆ+ ಸುಯೋಧನನ್+ಅರಮನೆಯನ್+ಅವ
ನೀಶ +ಹೊಕ್ಕನು+ ಪವನಸುತ +ದು
ಶ್ಯಾಸನನ+ ಸದನವನು +ಪಾರ್ಥಗೆ +ಕರ್ಣ+ಭವನದಲಿ
ವಾಸವಾದುದು +ಯಮಳರಿಗೆ +ದು
ಶ್ಯಾಸನ+ಅನುಜರ್+ಅರಮನೆಗಳ್+ಉಳಿದ್
ಐಸು+ಮನೆ +ಭಂಡಾರವಾದುದು +ಭೂಪ +ಕೇಳೆಂದ

ಅಚ್ಚರಿ:
(೧) ಸದನ, ಮನೆ, ಅರಮನೆ, ಭವನ – ಸಾಮ್ಯಾರ್ಥ ಪದ
(೨) ಒಂದೇ ಪದವಾಗಿ ರಚನೆ: ಸುಯೋಧನನರಮನೆಯನವನೀಶ, ದುಶ್ಯಾಸನಾನುಜರರಮನೆಗಳುಳಿದೈಸುಮನೆ

ನಿಮ್ಮ ಟಿಪ್ಪಣಿ ಬರೆಯಿರಿ