ಪದ್ಯ ೩: ಯಾವ ಜನರು ಹಸ್ತಿನಾಪುರಕ್ಕೆ ಬಂದು ಧರ್ಮಜನನ್ನು ಕಂಡರು?

ಜಲಧಿ ಮಧ್ಯದ ಕುರುವ ಘಟ್ಟಾ
ವಳಿಯ ಕೊಳ್ಳದ ಕುಹರ ಕುಂಜದ
ನೆಲೆಯ ಗಿರಿಸಾನುಗಳ ಶಿಖರದ ದುರ್ಗವೀಥಿಗಳ
ನೆಲನಶೇಷಪ್ರಜೆ ನಿಖಿಳ ಮಂ
ಡಳಿಕೆ ಮನ್ನೆಯ ವಂದಿಜನ ಸಂ
ಕುಲ ಮತಂಗಜಪುರಿಗೆ ಬಂದುದು ನೃಪನ ಕಾಣಿಕೆಗೆ (ಗದಾ ಪರ್ವ, ೧೩ ಸಂಧಿ, ೩ ಪದ್ಯ)

ತಾತ್ಪರ್ಯ:
ಸಮುದ್ರ ಮಧ್ಯದ ದ್ವೀಪಗಳು, ಘಟ್ಟಗಳು, ಕಣಿವೆಗಳು, ಬೆಟ್ಟಗಳು, ಪ್ರಸ್ಥಭೂಮಿಗಳು, ಶಿಖರಗಳು, ಕೋಟೆಗಳಲ್ಲಿದ್ದ ಎಲ್ಲಾ ಮಾಂಡಲಿಕರು, ನಾಯಕರು, ವಂದಿಗಳು ಹಸ್ತಿನಾಪುರಕ್ಕೆ ಬಂದು ದೊರೆಗೆ ಕಾಣಿಕೆ ಕೊಟ್ಟರು.

ಅರ್ಥ:
ಜಲಧಿ: ಸಾಗರ; ಮಧ್ಯ: ನಡುವೆ; ಘಟ್ಟ: ಬೆಟ್ಟಗಳ ಸಾಲು; ಆವಳಿ: ಸಾಲು; ಕೊಳ್ಳ: ತಗ್ಗಾಗಿರುವ ಪ್ರದೇಶ, ಹಳ್ಳ; ಕುಹರ: ಗವಿ, ಗುಹೆ; ಕುಂಜ: ಗುಹೆ; ನೆಲೆ: ಭೂಮಿ; ಗಿರಿ: ಬೆಟ್ಟ; ಸಾನು: ಬೆಟ್ಟದ ಮೇಲಿನ ಸಮತಲವಾದ ಪ್ರದೇಶ, ಪ್ರಸ್ಥಭೂಮಿ; ಶಿಖರ: ಬೆಟ್ಟದ ತುದಿ; ದುರ್ಗ: ಕೋಟೆ; ವೀಥಿ: ಮಾರ್ಗ; ಶೇಷ: ಉಳಿದ; ಪ್ರಜೆ: ನಾಗರೀಕ; ವಂದಿ: ಹೊಗಳುಭಟ್ಟ; ಸಂಕುಲ: ಗುಂಪು; ಮತಂಗಜ: ಆನೆ; ಬಂದು: ಆಗಮಿಸು; ನೃಪ: ರಾಜ; ಕಾಣಿಕೆ: ಕೊಡುಗೆ;

ಪದವಿಂಗಡಣೆ:
ಜಲಧಿ +ಮಧ್ಯದ+ ಕುರುವ +ಘಟ್ಟಾ
ವಳಿಯ +ಕೊಳ್ಳದ +ಕುಹರ +ಕುಂಜದ
ನೆಲೆಯ +ಗಿರಿಸಾನುಗಳ +ಶಿಖರದ +ದುರ್ಗ+ವೀಥಿಗಳ
ನೆಲನ+ಶೇಷ+ಪ್ರಜೆ+ ನಿಖಿಳ +ಮಂ
ಡಳಿಕೆ +ಮನ್ನೆಯ +ವಂದಿಜನ +ಸಂ
ಕುಲ +ಮತಂಗಜಪುರಿಗೆ +ಬಂದುದು +ನೃಪನ +ಕಾಣಿಕೆಗೆ

ಅಚ್ಚರಿ:
(೧) ಹಸ್ತಿನಾಪುರಕ್ಕೆ ಮತಂಗಜ ಪದದ ಬಳಕೆ
(೨) ಕ ಕಾರದ ತ್ರಿವಳಿ ಪದ – ಕೊಳ್ಳದ ಕುಹರ ಕುಂಜದ

ನಿಮ್ಮ ಟಿಪ್ಪಣಿ ಬರೆಯಿರಿ