ಪದ್ಯ ೧: ಯಾವ ಜನರು ಧರ್ಮಜನನ್ನು ನೋಡಲು ಬಂದರು?

ಕೇಳು ಜನಮೇಜಯ ಧರಿತ್ರೀ
ಪಾಲ ಹಿಮಗಿರಿ ತೊಡಗಿ ಸಾಗರ
ವೇಲೆ ಪರಿಯಂತಖಿಳ ನಗರ ಗ್ರಾಮ ಪುರವರದ
ಮೇಲುವರ್ಣಪ್ರಮುಖವಾ ಚಾಂ
ಡಾಲರವಧಿ ಸಮಸ್ತ ಭೂಜನ
ಜಾಲ ಹಸ್ತಿನಪುರಿಗೆ ಬಂದುದು ಕಂಡುದವನಿಪನ (ಗದಾ ಪರ್ವ, ೧೩ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಹಿಮಗಿರಿಯಿಂದ ಸಮುದ್ರದವರೆಗಿರುವ ಎಲ್ಲಾ ನಗರಗಲ ಗ್ರಾಮಗಲ ಎಲ್ಲಾ ವರ್ಣಗಳ ಎಲ್ಲಾ ಜನರೂ ಹಸ್ತಿನಾಪುರಕ್ಕೆ ಬಂದು ಯುಧಿಷ್ಠಿರನನ್ನು ಕಂಡು ಕಾಣಿಕೆ ನೀಡಿದರು.

ಅರ್ಥ:
ಕೇಳು: ಆಲಿಸು; ಧರಿತ್ರೀ: ಭೂಮಿ; ಧರಿತ್ರೀಪಾಲ: ರಾಜ; ಹಿಮಗಿರಿ: ಹಿಮಾಲಯ; ತೊಡಗು: ಒದಗು; ಸಾಗರ: ಸಮುದ್ರ; ಪರಿಯಂತ: ವರೆಗೂ; ನಗರ: ಪುರ; ಗ್ರಾಮ: ಹಳ್ಳಿ; ಪುರ: ಊರು; ವರ್ಣ: ಬಣ, ಪಂಗಡ; ಪ್ರಮುಖ: ಮುಖ್ಯ; ಅವಧಿ: ಕಾಲ; ಸಮಸ್ತ: ಎಲ್ಲಾ; ಭೂ: ಭೂಮಿ; ಜನ: ಗುಂಪು; ಜಾಲ: ಗುಂಪು; ಬಂದು: ಆಗಮಿಸು; ಅವನಿಪ: ರಾಜ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಹಿಮಗಿರಿ +ತೊಡಗಿ +ಸಾಗರ
ವೇಲೆ +ಪರಿಯಂತ್+ಅಖಿಳ +ನಗರ +ಗ್ರಾಮ +ಪುರವರದ
ಮೇಲುವರ್ಣನ+ಪ್ರಮುಖವಾ+ ಚಾಂ
ಡಾಲರ್+ಅವಧಿ +ಸಮಸ್ತ+ ಭೂಜನ
ಜಾಲ +ಹಸ್ತಿನಪುರಿಗೆ +ಬಂದುದು +ಕಂಡುದ್+ಅವನಿಪನ

ಅಚ್ಚರಿ:
(೧) ಧರಿತ್ರೀಪಾಲ, ಅವನಿಪ – ಸಮಾನಾರ್ಥಕ ಪದ
(೨) ಭಾರತದ ವಿಸ್ತಾರವನ್ನು ಹೇಳುವ ಪರಿ – ಹಿಮಗಿರಿ ತೊಡಗಿ ಸಾಗರವೇಲೆ ಪರಿಯಂತ

ನಿಮ್ಮ ಟಿಪ್ಪಣಿ ಬರೆಯಿರಿ