ಪದ್ಯ ೧: ಗಾಂಧಾರಿಯು ಕೃಷ್ಣನಿಗೆ ಯಾರನ್ನು ತೋರಿಸಲು ಕೇಳಿದಳು?

ಕೇಳು ಜನಮೇಜಯ ಧರಿತ್ರೀ
ಪಾಲ ಕೃಷ್ಣನ ಕರೆದು ನಯದಲಿ
ಲೋಲಲೋಚನೆ ನುಡಿದಳಂತಸ್ತಾಪ ಶಿಖಿ ಜಡಿಯೆ
ಏಳು ತಂದೆ ಮುಕುಂದ ಕದನ
ವ್ಯಾಳವಿಷನಿರ್ದಗ್ಧಧರಣೀ
ಪಾಲವರ್ಗವ ತೋರಿಸೆಂದಳು ತರಳೆ ಕೈಮುಗಿದು (ಗದಾ ಪರ್ವ, ೧೨ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಗಾಂಧಾರಿಯು ಕೃಷ್ಣನನ್ನು ಕರೆದು ತನ್ನ ಮನಸ್ಸಿನ ದುಃಖವನ್ನು ಅವನೆದುರು ತೋಡಿಕೊಂಡಳು, ತಂದೆ ಕೃಷ್ಣಾ ಯುದ್ಧ ಸರ್ಪದ ವಿಷದ ಬೆಂಕಿಯಿಂದ ದಹಿಸಿದ ಮೃತರಾಜರನ್ನು ನನಗೆ ತೋರಿಸು ಎಂದು ಕೇಳಿದಳು.

ಅರ್ಥ:
ಧರಿತ್ರೀಪಾಲ: ರಾಜ; ಕರೆದು: ಬರೆಮಾಡು; ನಯ: ಪ್ರೀತಿ; ಲೋಲಲೋಚನೆ: ಅತ್ತಿತ್ತ ಅಲುಗಾಡುವ, ಪ್ರೀತಿ ಕಣ್ಣುಳ್ಳ; ನುಡಿ: ಮಾತಾಡು; ಅಂತಸ್ತಾಪ: ಮನಸ್ಸಿನ ದುಃಖ; ಶಿಖಿ: ಬೆಂಕಿ; ಜಡಿ: ಕೂಗು, ಧ್ವನಿಮಾಡು; ಏಳು: ಮೇಲೇಳು; ತಂದೆ: ಪಿತ; ಕದನ: ಯುದ್ಧ; ವ್ಯಾಳ: ಸರ್ಪ; ವಿಷ: ಗರಲ; ದಗ್ಧ: ದಹಿಸಿದುದು, ಸುಟ್ಟುದು; ಧರಣೀಪಾಲ: ರಾಜ; ವರ್ಗ: ಗುಂಪು; ತೋರಿಸು: ಕಾಣಿಸು; ತರಳೆ: ಹೆಣ್ಣು; ಕೈಮುಗಿದು: ನಮಸ್ಕೈರಿಸು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಕೃಷ್ಣನ +ಕರೆದು +ನಯದಲಿ
ಲೋಲಲೋಚನೆ +ನುಡಿದಳ್+ಅಂತಸ್ತಾಪ+ಶಿಖಿ +ಜಡಿಯೆ
ಏಳು +ತಂದೆ +ಮುಕುಂದ +ಕದನ
ವ್ಯಾಳ+ವಿಷ+ನಿರ್ದಗ್ಧ+ಧರಣೀ
ಪಾಲ+ವರ್ಗವ +ತೋರಿಸೆಂದಳು +ತರಳೆ +ಕೈಮುಗಿದು

ಅಚ್ಚರಿ:
(೧) ಲೋಲಲೋಚನೆ, ತರಳೆ; ಧರಿತ್ರೀಪಾಲ, ಧರಣೀಪಾಲ – ಸಮಾನಾರ್ಥಕ ಪದ
(೨) ರೂಪಕದ ಪ್ರಯೋಗ – ಕದನ ವ್ಯಾಳವಿಷನಿರ್ದಗ್ಧಧರಣೀಪಾಲವರ್ಗವ ತೋರಿಸೆಂದಳು ತರಳೆ

ನಿಮ್ಮ ಟಿಪ್ಪಣಿ ಬರೆಯಿರಿ