ಪದ್ಯ ೪೮: ವ್ಯಾಸರು ಗಾಂಧಾರಿಯನ್ನು ಹೇಗೆ ಸಮಾಧಾನ ಪಡಿಸಿದರು?

ಮುನಿಯದಿರು ಗಾಂಧಾರಿ ದಿಟ ನಿ
ನ್ನನುಜನಿಕ್ಕಿದ ಸಾರಿ ನಿನ್ನಯ
ತನುಜರನು ನಿನ್ನಖಿಳಮಿತ್ರಜ್ಞಾತಿ ಬಾಂಧವರ
ಮನುಜಪತಿಗಳನಂತವನು ರಿಪು
ಜನಪ ಶರವಹ್ನಿಯಲಿ ಬೇಳಿದು
ದಿನಿತು ಶೋಕೋದ್ರೇಕ ನಿನಗೇಕೆಂದನಾ ಮುನಿಪ (ಗದಾ ಪರ್ವ, ೧೧ ಸಂಧಿ, ೪೮ ಪದ್ಯ)

ತಾತ್ಪರ್ಯ:
ವೇದವ್ಯಾಸರು ಗಾಂಧಾರಿಯನ್ನು ಸಮಾಧಾನ ಪಡಿಸುತ್ತಾ, ನನ್ನ ಮಾತುಗಳನ್ನು ಕೇಳಿ ಕೋಪಗೊಳ್ಳಬೇಡ. ನಿನ್ನ ತಮ್ಮನು ಹಾಕಿದ ದಾಳವು ನಿನ್ನ ಮಕ್ಕಳು, ಮಿತ್ರರು, ಜ್ಞಾತಿಗಳು ಬಾಂಧವರು ಲೋಕದ ಸಮಸ್ತ ರಾಜರು ಎಲ್ಲರನ್ನೂ ಶತ್ರುಗಳ ಬಾಣಾಗ್ನಿಗೆ ಬಲಿಕೊಟ್ಟಿತು. ಇಷ್ಟೊಂದು ಶೋಕ ಉದ್ರೇಕಗಳು ನಿನಗೇಕೆ ಎಂದು ಸಂತೈಸಿದರು.

ಅರ್ಥ:
ಮುನಿ: ಕೋಪ; ದಿಟ: ನಿಜ; ಅನುಜ: ತಮ್ಮ; ಇಕ್ಕು: ಇಡು; ಸಾರಿ: ದಾಳ; ತನುಜ: ಮಕ್ಕಳು; ಅಖಿಳ: ಎಲ್ಲಾ; ಮಿತ್ರ: ಸ್ನೇಹಿತ; ಜ್ಞಾತಿ: ತಂದೆಯ ಕಡೆಯ ಬಂಧು, ದಾಯಾದಿ; ಬಾಂಧವ: ಪರಿವಾರದ ಜನ; ಮನುಜ: ನರ, ಮನುಷ್ಯ; ಮನುಜಪತಿ: ರಾಜ; ರಿಪು: ವೈರಿ; ಜನಪ: ರಾಜ; ಶರ: ಬಾಣ; ವಹ್ನಿ: ಅಗ್ನಿ, ಬಂಕಿ; ಬೇಳುವೆ: ಯಜ್ಞ; ಶೋಕ: ದುಃಖ; ಉದ್ರೇಕ: ಉದ್ವೇಗ, ಆವೇಗ, ತಳಮಳ; ಮುನಿಪ: ಋಷಿ; ಅನಂತ: ಕೊನೆಯಿಲ್ಲದ;

ಪದವಿಂಗಡಣೆ:
ಮುನಿಯದಿರು +ಗಾಂಧಾರಿ +ದಿಟ +ನಿನ್ನ್
ಅನುಜನ್+ಇಕ್ಕಿದ +ಸಾರಿ +ನಿನ್ನಯ
ತನುಜರನು +ನಿನ್ನ್+ಅಖಿಳ+ಮಿತ್ರ+ಜ್ಞಾತಿ +ಬಾಂಧವರ
ಮನುಜಪತಿಗಳ್+ಅನಂತವನು +ರಿಪು
ಜನಪ +ಶರವಹ್ನಿಯಲಿ +ಬೇಳಿದುದ್
ಇನಿತು +ಶೋಕ+ಉದ್ರೇಕ +ನಿನಗೇಕ್+ಎಂದನಾ +ಮುನಿಪ

ಅಚ್ಚರಿ:
(೧) ಮುನಿ, ಮುನಿಪ – ಪದ್ಯದ ಮೊದಲ ಹಾಗು ಕೊನೆಯ ಪದ
(೨) ಅನುಜ, ತನುಜ, ಮನುಜ, ಪ್ರಾಸ ಪದ
(೩) ಮನುಜಪತಿ, ಜನಪ – ಸಮಾನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ