ಪದ್ಯ ೩೫: ಧೃತರಾಷ್ಟ್ರನು ವ್ಯಾಸರ ಸಲಹೆಗೆ ಏನೆಂದು ಉತ್ತರಿಸಿದ?

ಹೈ ಹಸಾದವು ನಿಮ್ಮ ಚಿತ್ತಕೆ
ಬೇಹ ಹದನೇ ಕಾರ್ಯಗತಿ ಸಂ
ದೇಹವೇ ಪಾಂಡುವಿನ ಮಕ್ಕಳು ಮಕ್ಕಳವರೆಮಗೆ
ಕಾಹುರರು ಕಲ್ಮಷರು ಬಂಧು
ದ್ರೋಹಿಗಳು ಗತವಾಯ್ತು ನಿಷ್ಪ್ರ
ತ್ಯೂಹವಿನ್ನೇನವರಿಗೆಂದನು ಮುನಿಗೆ ಧೃತರಾಷ್ಟ್ರ (ಗದಾ ಪರ್ವ, ೧೧ ಸಂಧಿ, ೩೫ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ವ್ಯಾಸರಿಗೆ ಉತ್ತರಿಸುತ್ತಾ, ನಿಮ್ಮ ಸಲಹೆಯು ನನಗೆ ಮಹಾಪ್ರಸಾದ, ನಿಮ್ಮ ಮನಸ್ಸಿಗೆ ಬಂದುದನ್ನೇ ನಾನು ನಡೆಸುತ್ತೇನೆ. ಪಾಂಡುವಿನ ಮಕ್ಕಳು ನನ್ನ ಮಕ್ಕಳೇ, ಮನಸ್ಸಿನಲ್ಲಿ ಕೊಳೆಯನ್ನಿಟ್ಟುಕೊಂಡು ದುಡುಕಿ ಬಂಧು ದ್ರೋಹ ಮಾಡಿದವರು ಮಡಿದುಹೋದರು. ಅದನ್ನು ತಪ್ಪಿಸುವುದಾದರೂ ಹೇಗೆ? ಎಂದು ವೇದವ್ಯಾಸರನ್ನು ಧೃತರಾಷ್ಟ್ರ ಕೇಳಿದ.

ಅರ್ಥ:
ಹಸಾದ: ಮಹಾಪ್ರಸಾದ; ಚಿತ್ತ: ಮನಸ್ಸು; ಹದ: ರೀತಿ; ಬೇಹ: ಬಂದುದು; ಕಾರ್ಯ: ಕೆಲಸ; ಗತಿ: ಚಲನೆ, ವೇಗ; ಸಂದೇಹ: ಸಂಶಯ; ಮಕ್ಕಳು: ಪುತ್ರರು; ಕಾಹುರ: ಸೊಕ್ಕು, ಕೋಪ; ಕಲ್ಮಷ: ದುಷ್ಟ; ಬಂಧು: ಸಂಬಂಧಿಕ; ದ್ರೋಹಿ: ದುಷ್ಟ; ಗತ: ಸತ್ತುಹೋದ, ಹಿಂದೆ ಆದುದು; ಪ್ರತ್ಯೂಹ: ಅಡ್ಡಿ, ಅಡಚಣೆ; ಮುನಿ: ಋಷಿ;

ಪದವಿಂಗಡಣೆ:
ಹೈ +ಹಸಾದವು +ನಿಮ್ಮ +ಚಿತ್ತಕೆ
ಬೇಹ +ಹದನೇ +ಕಾರ್ಯಗತಿ +ಸಂ
ದೇಹವೇ +ಪಾಂಡುವಿನ +ಮಕ್ಕಳು +ಮಕ್ಕಳವರ್+ಎಮಗೆ
ಕಾಹುರರು +ಕಲ್ಮಷರು +ಬಂಧು
ದ್ರೋಹಿಗಳು +ಗತವಾಯ್ತು +ನಿಷ್ಪ್ರ
ತ್ಯೂಹವ್+ಇನ್ನೇನವರಿಗೆಂದನು +ಮುನಿಗೆ +ಧೃತರಾಷ್ಟ್ರ

ಅಚ್ಚರಿ:
(೧) ಕೌರವರನ್ನು ದೂಷಿಸಿದ ಪರಿ – ಕಾಹುರರು ಕಲ್ಮಷರು ಬಂಧು ದ್ರೋಹಿಗಳು ಗತವಾಯ್ತು
(೨) ದೇಹ, ಬೇಹ – ಪ್ರಾಸ ಪದ

ನಿಮ್ಮ ಟಿಪ್ಪಣಿ ಬರೆಯಿರಿ