ಪದ್ಯ ೨೩: ಧೃತರಾಷ್ಟ್ರನು ಅಶ್ವತ್ಥಾಮಾದಿಗಳಿಗೆ ಏನೆಂದು ಹೇಳಿದನು.

ಬಂದು ಧೃತರಾಷ್ಟ್ರವನೀಶನ
ಮುಂದೆ ನಿಂದರು ರಾಯಕಟಕವ
ಕೊಂದ ರಜನಿಯ ರಹವನಭಿವರ್ಣಿಸಿದರರಸಮ್ಗೆ
ಸಂದುದೇ ಛಲವೆನ್ನ ಮಗನೇ
ನೆಂದನೈ ಹರಿಬದಲಿ ಹರುಷವ
ತಂದಿರೈ ತಮಗಿನ್ನು ಲೇಸಾಯ್ತೆಂದನಂಧನೃಪ (ಗದಾ ಪರ್ವ, ೧೧ ಸಂಧಿ, ೨೩ ಪದ್ಯ)

ತಾತ್ಪರ್ಯ:
ಮೂವರೂ ಬಂದು ಧೃತರಾಷ್ಟ್ರನ ಮುಂದೆ ನಿಂತು, ರಾತ್ರಿಯಲ್ಲಿ ಪಾಂಡವ ಸೇನೆಯನ್ನು ಕೊಂದ ರೀತಿಯನ್ನು ಧೃತರಾಷ್ಟ್ರನಿಗೆ ಹೇಳಿದರು. ಅವನು ಸೇಡನ್ನು ತೀರಿಸಿಕೊಂಡಿರಾ? ನಿಮ್ಮ ಕರ್ತವ್ಯವನ್ನು ಕೇಳಿ ನನ್ನ ಮಗನು ಏನೆಂದ? ನೀವು ನನಗೆ ಹರುಷವನ್ನು ತಂದಿರಿ ಒಳ್ಳೆಯದಾಯಿತು, ಎಂದು ಸಂತೋಷಪಟ್ಟನು.

ಅರ್ಥ:
ಬಂದು: ಆಗಮಿಸು; ಅವನೀಶ: ರಾಜ; ಮುಂದೆ: ಎದುರು; ನಿಂದು: ನಿಲ್ಲು; ರಾಯ: ರಾಜ; ಕಟಕ: ಸೈನ್ಯ; ಕೊಂದು: ಸಾಯಿಸು; ರಜನಿ: ರಾತ್ರಿ; ರಹ: ಗುಟ್ಟು, ರಹಸ್ಯ; ವರ್ಣಿಸು: ವಿವರಿಸು; ಅರಸ: ರಾಜ; ಸಂದು: ಪಡೆದ; ಛಲ: ದೃಢ ನಿಶ್ಚಯ; ಮಗ: ಸುತ; ಹರಿಬ: ಕೆಲಸ, ಕಾರ್ಯ, ಯುದ್ಧ; ಹರುಷ: ಸಂತಸ; ಲೇಸು: ಒಳಿತು; ಅಂಧ: ಕುರುಡ; ನೃಪ: ರಾಜ; ಅಂಧನೃಪ: ಧೃತರಾಷ್ಟ್ರ;

ಪದವಿಂಗಡಣೆ:
ಬಂದು +ಧೃತರಾಷ್ಟ್ರ್+ಅವನೀಶನ
ಮುಂದೆ +ನಿಂದರು +ರಾಯ+ಕಟಕವ
ಕೊಂದ+ ರಜನಿಯ +ರಹವನ್+ಅಭಿವರ್ಣಿಸಿದರ್+ಅರಸಂಗೆ
ಸಂದುದೇ+ ಛಲವೆನ್ನ+ ಮಗನೇನ್
ಎಂದನೈ +ಹರಿಬದಲಿ +ಹರುಷವ
ತಂದಿರೈ +ತಮಗಿನ್ನು +ಲೇಸಾಯ್ತೆಂದನ್+ಅಂಧನೃಪ

ಅಚ್ಚರಿ:
(೧) ಧೃತರಾಷ್ಟ್ರ, ಅಂಧನೃಪ – ಹೆಸರಿಸುವ ಪರಿ
(೨) ಅವನೀಶ, ಅರಸ – ಸಮಾನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ