ಪದ್ಯ ೧೧: ಎಲ್ಲಾ ಜೀವರಿಗೂ ಯಾವುದು ತಪ್ಪದೆ ಬರುತ್ತದೆ?

ಏನನೆಂದೆವು ಹಿಂದೆ ಧರ್ಮ ನಿ
ಧಾನವನು ಕಯ್ಯೊಡನೆ ಮರೆದೆಯಿ
ದೇನು ನಿನ್ನಯ ಮತಿಯ ವಿಭ್ರಮೆ ನಮ್ಮ ಹೇಳಿಕೆಗೆ
ಭಾನುಮತಿಯನು ತಿಳುಹು ನಿನ್ನಯ
ಮಾನಿನಿಯ ಸಂತೈಸು ಸಂಸಾ
ರಾನುಗತಿ ತಾನಿದು ಚತುರ್ದಶ ಜಗದ ಜೀವರಿಗೆ (ಗದಾ ಪರ್ವ, ೧೧ ಸಂಧಿ, ೧೧ ಪದ್ಯ)

ತಾತ್ಪರ್ಯ:
ಹಿಂದೆ ನಾವು ಬೋಧಿಸಿದ ಧರ್ಮ ಮಾರ್ಗವು ನೆನಪಿದೆಯಾ? ಅದನ್ನು ಕೇಳಿದೊಡನೆ ಮರೆತುಬಿಟ್ಟೆ. ಈಗ ನಾವಾಡಿದುದನ್ನು ಕೇಳಿ ಮೂರ್ಛೆಹೋದೆ. ಹೀಗೆ ಮಾಡಿದರೆ ಹೇಗೆ? ಭಾನುಮತಿ, ಗಾಂಧಾರಿಯನ್ನು ಯಾರು ಸಮಾಧಾನಪಡಿಸುವವರು? ಇದೇನು ನಿಮಗೆ ಮಾತ್ರ ಬಂದುದಲ್ಲ. ಹದಿನಾಲ್ಕು ಲೋಕಗಲ ಜಿವರಿಗೂ ಹುಟ್ಟುಸಾವಿನಂತೆ, ಸುಖ ದುಃಖಗಳೂ ತಪ್ಪದೆ ಬರುತ್ತವೆ ಎಂದು ವ್ಯಾಸರು ಹೇಳಿದರು.

ಅರ್ಥ:
ಹಿಂದೆ: ಗತಕಾಲ; ಧರ್ಮ: ಧಾರಣ ಮಾಡಿದುದು; ನಿಧಾನ: ವಿಳಂಬ, ಸಾವಕಾಶ; ಒಡನೆ: ಕೂಡಲೆ; ಮರೆತೆ: ಜ್ಞಾಪಕದಿಂದ ದೂರಮಾಡು; ಮತಿ: ಬುದ್ಧಿ; ವಿಭ್ರಮ: ಅಲೆದಾಟ, ಸುತ್ತಾಟ; ಹೇಳಿಕೆ: ನುಡಿ; ತಿಳುಹು: ತಿಳಿಸು; ಮಾನಿನಿ: ಹೆಣ್ಣು; ಸಂತೈಸು: ಸಮಾಧಾನ ಪಡಿಸು; ಸಂಸಾರ: ಬಂಧುಜನ; ಅನುಗತಿ: ಸಾವು; ಚತುರ್ದಶ: ಹದಿನಾಲ್ಕು; ಜಗ: ಪ್ರಪಂಚ; ಜೀವರು: ಜೀವಿ;

ಪದವಿಂಗಡಣೆ:
ಏನನೆಂದೆವು +ಹಿಂದೆ +ಧರ್ಮ +ನಿ
ಧಾನವನು +ಕಯ್ಯೊಡನೆ +ಮರೆದೆ+
ಇದೇನು +ನಿನ್ನಯ +ಮತಿಯ +ವಿಭ್ರಮೆ +ನಮ್ಮ +ಹೇಳಿಕೆಗೆ
ಭಾನುಮತಿಯನು +ತಿಳುಹು +ನಿನ್ನಯ
ಮಾನಿನಿಯ +ಸಂತೈಸು +ಸಂಸಾ
ರಾನುಗತಿ+ ತಾನಿದು +ಚತುರ್ದಶ +ಜಗದ +ಜೀವರಿಗೆ

ಅಚ್ಚರಿ:
(೧) ಲೋಕ ನೀತಿ – ಸಂಸಾರಾನುಗತಿ ತಾನಿದು ಚತುರ್ದಶ ಜಗದ ಜೀವರಿಗೆ

ನಿಮ್ಮ ಟಿಪ್ಪಣಿ ಬರೆಯಿರಿ