ಪದ್ಯ ೧೦: ಅಶ್ವತ್ಥಾಮನು ದುರ್ಯೋಧನನನ್ನು ಎಲ್ಲಿಗೆ ತೆರಳಲು ಹೇಳಿದನು?

ಹರಿಬ ಬಂದುದೆ ಪಾಂಡುಸುತರುಳಿ
ದಿರಲಿ ಸಾಕಂತಿರಲಿ ನಿಮ್ಮಡಿ
ಪುರಕೆ ಬಿಜಯಂಗೈಯ್ಯಿರೇ ಚೈತನ್ಯಗತಿಯೆಂತು
ಹರಣವುಳಿದಡೆ ಪಾಂಡುತನುಜರ
ಶಿರವ ಕೇವಣಿಸುವೆನಲೈ ಕೇ
ಸರಿಯ ಪೀಠದೊಳೆಂದನಶ್ವತ್ಥಾಮ ಕೈಮುಗಿದು (ಗದಾ ಪರ್ವ, ೧೦ ಸಂಧಿ, ೧೦ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ನುಡಿಯುತ್ತಾ, ನಿಮ್ಮ ಕೆಲಸವು ಆಯಿತೇ? ಪಾಂಡವರು ಬದುಕಿ ಉಳಿದಿರಲಿ. ನೀವು ಹಸ್ತಿನಾಪುರಕ್ಕೆ ಬಿಜಯಂಗೈಸಿರಿ. ನಿಮ್ಮ ತ್ರಾಣ ಹೇಗಿದೆ? ಪಾಂಡವರ ಪ್ರಾಣವು ಉಳಿದಿರಬಹುದು. ನಾನು ಬದುಕಿದ್ದರೆ ಅವರ ತಲೆಗಳನ್ನು ಕಡಿದು ಸಿಂಹಾಸನಕ್ಕೆ ಹಾರವಾಗಿ ಪೋಣಿಸಿ ಕಟ್ಟುತ್ತೇನೆ ಎಂದನು.

ಅರ್ಥ:
ಹರಿಬ: ಕಾರ್ಯ, ಕೆಲಸ; ಬಂದು: ಆಗಮಿಸು; ಸುತ: ಮಕ್ಕಳು; ಉಳಿದಿರಲಿ: ಜೀವಿಸಲಿ; ಸಾಕು: ನಿಲ್ಲು; ನಿಮ್ಮಡಿ: ನಿಮ್ಮ ಪಾದ; ಪುರ: ಊರು; ಬಿಜಯಂಗೈ: ದಯಮಾಡಿಸಿ, ಹೊರಡಿ; ಚೈತನ್ಯ: ಜೀವದ ಲಕ್ಷಣ, ಜೀವಂತಿಕೆ; ಗತಿ: ವೇಗ; ಹರಣ: ಜೀವ, ಪ್ರಾಣ; ತನುಜ: ಮಕ್ಕಳು; ಶಿರ: ತಲೆ; ಕೇವಣಿ: ಕೀಲಿಸುವಿಕೆ; ಕೇಸರಿ: ಸಿಂಹ; ಪೀಠ: ಆಸನ; ಕೈಮುಗಿ: ನಮಸ್ಕರಿಸು;

ಪದವಿಂಗಡಣೆ:
ಹರಿಬ+ ಬಂದುದೆ +ಪಾಂಡುಸುತರ್+ಉಳಿ
ದಿರಲಿ +ಸಾಕಂತಿರಲಿ +ನಿಮ್ಮಡಿ
ಪುರಕೆ +ಬಿಜಯಂಗೈಯ್ಯಿರೇ +ಚೈತನ್ಯ+ಗತಿಯೆಂತು
ಹರಣವುಳಿದಡೆ+ ಪಾಂಡು+ತನುಜರ
ಶಿರವ +ಕೇವಣಿಸುವೆನಲೈ +ಕೇ
ಸರಿಯ ಪೀಠದೊಳ್+ಎಂದನ್+ಅಶ್ವತ್ಥಾಮ +ಕೈಮುಗಿದು

ಅಚ್ಚರಿ:
(೧) ಅಶ್ವತ್ಥಾಮನ ಧೀರ ನುಡಿ – ಪಾಂಡುತನುಜರ ಶಿರವ ಕೇವಣಿಸುವೆನಲೈ ಕೇಸರಿಯ ಪೀಠದೊಳೆಂದನಶ್ವತ್ಥಾಮ
(೨) ಸುತ, ತನುಜ – ಸಮಾನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ