ಪದ್ಯ ೩೩: ಅಶ್ವತ್ಥಾಮನು ಪಾಂಡವರನ್ನು ಅರಸಿ ಯಾರ ಅರಮನೆಗೆ ಬಂದನು?

ಗಜಬಜವಿದೇನೆನುತ ನಿದ್ರೆಯ
ಮಜಡರೊಳಗೊಳಗರಿದರೀತನ
ಭುಜಬಲಕೆ ಮಲೆತವರ ಕಾಣೆನು ಸೃಂಜಯಾದಿಗಳ
ರಜನಿಯಲಿ ರೌಕುಳವ ಮಾಡಿದ
ನಜಿತಸಾಹಸನಿತ್ತ ದ್ರುಪದಾ
ತ್ಮಜೆಯ ಭವನದ ಹೊರೆಗೆ ಬಂದನು ಪಾಂಡವರನರಸಿ (ಗದಾ ಪರ್ವ, ೯ ಸಂಧಿ, ೩೩ ಪದ್ಯ)

ತಾತ್ಪರ್ಯ:
ಈ ಸದ್ದಿನಿಂದ ನಿದ್ದೆಯಲ್ಲಿ ಮಗ್ನರಾದವರು ಎದ್ದು ಗೊಂದಲಗೊಂಡು ಇವನು ಅಶ್ವತ್ಥಾಮನೇ ಎಂದು ತಿಳಿದರೂ ಸೃಂಜಯಾದಿಗಳು ಇವನ ಎದುರು ಹೋರಾಡಿ ಮಡಿದರು. ಆ ರಾತ್ರಿಯಲ್ಲಿ ರಕ್ತದ ಹೊನಲುಹರಿಸಿ ದ್ರೌಪದಿಯ ಭವನದಲ್ಲಿ ಪಾಂಡವರಿರಬಹುದೆಂದು ಹುಡುಕುತ್ತಾ ಹೋದನು.

ಅರ್ಥ:
ಗಜಬಜ: ಗೊಂದಲ; ನಿದ್ರೆ: ಶಯನ; ಮಜಡ: ದಡ್ಡ, ತಿಳಿಗೇಡಿ; ಭುಜಬಲ: ಪರಾಕ್ರಮ; ಮಲೆ: ಉದ್ಧಟತನದಿಂದ ಕೂಡಿರು, ಗರ್ವಿಸು; ಕಾಣು: ತೋರು; ರಜನಿ: ರಾತ್ರಿ; ರೌಕುಳ: ಅವ್ಯವಸ್ಥೆ, ಆಧಿಕ್ಯ; ಅಜಿತ: ಅಜೇಯ, ಸೋಲಿಲ್ಲದ; ಸಾಹಸ: ಪರಾಕ್ರಮ; ಆತ್ಮಜೆ: ಮಗಳು; ಭವನ: ಆಲಯ; ಹೊರೆ: ಹತ್ತಿರ, ಸಮೀಪ; ಬಂದು: ಆಗಮಿಸು; ಅರಸು: ಹುಡುಕು;

ಪದವಿಂಗಡಣೆ:
ಗಜಬಜವಿವ್+ಏನೆನುತ +ನಿದ್ರೆಯ
ಮಜಡರೊಳಲ್+ಒಳಗರಿದರ್+ಈತನ
ಭುಜಬಲಕೆ +ಮಲೆತವರ +ಕಾಣೆನು +ಸೃಂಜಯಾದಿಗಳ
ರಜನಿಯಲಿ +ರೌಕುಳವ +ಮಾಡಿದನ್
ಅಜಿತಸಾಹಸನ್+ಇತ್ತ+ ದ್ರುಪದಾ
ತ್ಮಜೆಯ +ಭವನದ +ಹೊರೆಗೆ +ಬಂದನು+ ಪಾಂಡವರನ್+ಅರಸಿ

ಅಚ್ಚರಿ:
(೧) ಅಶ್ವತ್ಥಾಮನನ್ನು ಅಜಿತಸಾಹಸ ಎಂದು ಕರೆದಿರುವುದು
(೨) ದ್ರೌಪದಿಯನ್ನು ದ್ರುಪದಾತ್ಮಜೆ ಎಂದು ಕರೆದಿರುವುದು
(೩) ಯುದ್ಧದ ತೀವ್ರತೆ – ರಜನಿಯಲಿ ರೌಕುಳವ ಮಾಡಿದನಜಿತಸಾಹಸನ್

ನಿಮ್ಮ ಟಿಪ್ಪಣಿ ಬರೆಯಿರಿ