ಪದ್ಯ ೧೯: ಮಂತ್ರಾಸ್ತ್ರದ ಅಧಿದೇವತೆಗಳು ಏನು ಮಾಡಿದರು?

ಉಗಿದು ಮಂತ್ರಾಸ್ತ್ರವನು ತಿರುವಿಂ
ದುಗುಳಿಚಿದಡಾ ಭೂತದಂಘ್ರಿಗೆ
ಮುಗಿದ ಕೈಗಳಲೆರಗಿದರು ಶಸ್ತ್ರಾಧಿದೇವಿಯರು
ಉಗಿದನೊರೆಯಲಡಾಯುಧವನು
ಬ್ಬೆಗದಲಪ್ಪಳಿಸಿದಡೆ ಕಯ್ಯಿಂ
ಜಗುಳ್ದು ಬಿದ್ದುದು ಝಂಕೆಯದ್ದುದು ಭಯದ ಝಾಡಿಯಲಿ (ಗದಾ ಪರ್ವ, ೯ ಸಂಧಿ, ೧೯ ಪದ್ಯ)

ತಾತ್ಪರ್ಯ:
ಆಗ ಅಶ್ವತ್ಥಾಮನು ದಿವ್ಯಾಸ್ತ್ರಗಳನ್ನು ಪ್ರಯೋಗಿಸಲು, ಆ ಅಸ್ತ್ರಗಳ ಮಂತ್ರಾಭಿಮಾನ ದೇವಿಯರು ಕೈ ಮುಗಿದು ಭೂತಕ್ಕೆ ನಮಸ್ಕರಿಸಿದರು. ಒರೆಯಿಂದ ಖಡ್ಗವನ್ನು ಹಿರಿದು ಉದ್ವೇಗದಿಂದ ಅಪ್ಪಳಿಸಿದರೆ ಕತ್ತಿಯು ಕೈಜಾರಿ ಕೆಳಕ್ಕೆ ಬಿದ್ದಿತು.

ಅರ್ಥ:
ಉಗಿ: ಹೊರಹಾಕು; ಅಸ್ತ್ರ: ಶಸ್ತ್ರ; ತಿರುಗು: ಬಿಲ್ಲಿನ ಹಗ್ಗ, ಹೆದೆ, ಮೌರ್ವಿ, ಸುತ್ತು; ಉಗುಳು: ಹೊರಹಾಕು; ಭೂತ: ದೆವ್ವ; ಅಂಘ್ರಿ: ಪಾದ; ಮುಗಿದ: ಜೋಡಿಸಿದ; ಕೈ: ಹಸ್ತ; ಎರಗು: ಬಾಗು, ನಮಸ್ಕರಿಸು; ಅಧಿದೇವತೆ: ಮುಖ್ಯವಾದ ದೇವತೆ; ಒರೆ: ಶೋಧಿಸಿ ನೋಡು, ಹೇಳು; ಆಯುಧ: ಶಸ್ತ್ರ; ಉಬ್ಬೆ: ರಭಸ; ಅಪ್ಪಳಿಸು: ತಾಗು; ಕಯ್ಯ್: ಹಸ್ತ; ಜಗುಳು: ಜಾರು; ಬಿದ್ದು: ಕುಸಿ; ಝಂಕೆ: ಆರ್ಭಟ; ಅದ್ದು: ತೋಯು, ಮುಳುಗು; ಭಯ: ಹೆದರಿಕೆ; ಝಾಡಿ: ಕಾಂತಿ;

ಪದವಿಂಗಡಣೆ:
ಉಗಿದು +ಮಂತ್ರಾಸ್ತ್ರವನು+ ತಿರುವಿಂದ್
ಉಗುಳಿಚಿದಡ್+ಆ+ ಭೂತದ್+ಅಂಘ್ರಿಗೆ
ಮುಗಿದ +ಕೈಗಳಲ್+ಎರಗಿದರು +ಶಸ್ತ್ರ+ಅಧಿದೇವಿಯರು
ಉಗಿದನ್+ಒರೆಯಲಡ್+ಆಯುಧವನ್
ಉಬ್ಬೆಗದಲ್+ಅಪ್ಪಳಿಸಿದಡೆ+ ಕಯ್ಯಿಂ
ಜಗುಳ್ದು+ ಬಿದ್ದುದು+ ಝಂಕೆ+ಅದ್ದುದು+ ಭಯದ +ಝಾಡಿಯಲಿ

ಅಚ್ಚರಿ:
(೧) ಉಗಿ – ೧,೨, ೪ ಸಾಲಿನ ಮೊದಲ ಪದ
(೨) ಮಂತ್ರಾಸ್ತ್ರವು ನಿಷ್ಪ್ರಯೋಜಕವಾಯಿತು ಎಂದು ಹೇಳಲು – ಭೂತದಂಘ್ರಿಗೆ
ಮುಗಿದ ಕೈಗಳಲೆರಗಿದರು ಶಸ್ತ್ರಾಧಿದೇವಿಯರು
(೩) ಬ, ಝ ಕಾರದ ಪದ ರಚನೆ – ಬಿದ್ದುದು ಝಂಕೆಯದ್ದುದು ಭಯದ ಝಾಡಿಯಲಿ

ನಿಮ್ಮ ಟಿಪ್ಪಣಿ ಬರೆಯಿರಿ