ಪದ್ಯ ೬೪: ಕೌರವರು ಯಾರ ಬಿಡಾರಕ್ಕೆ ಬಂದರು?

ಇವರು ಬಂದರು ದಕ್ಷಿಣದ ದೆಸೆ
ಗವರ ಪಾಳೆಯಕಾಗಿ ಸುತ್ತಲು
ಸವಡಿಗತ್ತಲೆಯಾಯ್ತು ಘನರೋಷಾಂಧಕಾರದಲಿ
ಇವರು ಮನದಲಿ ಕುಡಿದರಹಿತಾ
ರ್ಣವವರಿವರಿಗೆ ಗೋಚರವೆ ಪಾಂ
ಡವರು ಗದುಗಿನ ವೀರನಾರಾಯಣನ ಕರುಣದಲಿ (ಗದಾ ಪರ್ವ, ೮ ಸಂಧಿ, ೬೪ ಪದ್ಯ)

ತಾತ್ಪರ್ಯ:
ಆ ಮೂವರೂ ದಕ್ಷಿಣ ದಿಕ್ಕಿನೆಡೆಗೆ ಹೊರಟರು. ಪಾಂಡವರ ಪಾಳೆಯದ ಕಡೆಗೆ ನಡೆದರು. ಕತ್ತಲು ದಟ್ಟಯಿಸಿದಂತೆ ಇವರ ಘನರೋಷಾಂಧಕಾರವೂ ದಟ್ಟಯಿಸಿತು. ಪಾಂಡವಸೇನಾ ಸಮುದ್ರವನ್ನು ಇವರು ಮನಸ್ಸಿನಲ್ಲೇ ಕುಡಿದರು. ಆದರೆ ಶ್ರೀಕೃಷ್ಣನ ಕರುಣೆಯಿಂದ ಪಾಂಡವರು ಇವರಿಗೆ ಸಿಲುಕುವರೇ!

ಅರ್ಥ:
ಬಂದು: ಆಗಮಿಸು; ದೆಸೆ: ದಿಕ್ಕು; ಪಾಳೆಯ: ಬೀಡು; ಸುತ್ತಲು: ಬಳಸಿಕೊಂಡು; ಸವಡಿ: ಜೊತೆ, ಜೋಡಿ; ಕತ್ತಲೆ: ಅಂಧಕಾರ; ಘನ: ದೊಡ್ಡ, ಗಾಢ; ರೋಷ: ಕೋಪ; ಅಂಧಕಾರ: ಕತ್ತಲೆ; ಮನ: ಮನಸ್ಸು; ಕುದಿ: ಮರಳು, ಸಂಕಟಪಡು; ಕುಡಿ: ಪಾನಮಾಡು; ಅಹಿ: ವೈರಿ; ಆರ್ಣವ: ಯುದ್ಧ; ಗೋಚರ: ಕಾಣುವುದು, ಮಾಡಬಹುದಾದ; ಕರುಣೆ: ದಯೆ;

ಪದವಿಂಗಡಣೆ:
ಇವರು +ಬಂದರು +ದಕ್ಷಿಣದ +ದೆಸೆಗ್
ಅವರ+ ಪಾಳೆಯಕಾಗಿ +ಸುತ್ತಲು
ಸವಡಿ+ಕತ್ತಲೆಯಾಯ್ತು +ಘನ+ರೋಷಾಂಧಕಾರದಲಿ
ಇವರು +ಮನದಲಿ+ ಕುಡಿದರ್+ಅಹಿತ
ಅರ್ಣವವರ್+ಇವರಿಗೆ +ಗೋಚರವೆ +ಪಾಂ
ಡವರು +ಗದುಗಿನ +ವೀರನಾರಾಯಣನ +ಕರುಣದಲಿ

ಅಚ್ಚರಿ:
(೧) ರೂಪಕದ ಪ್ರಯೋಗ – ಸವಡಿಗತ್ತಲೆಯಾಯ್ತು ಘನರೋಷಾಂಧಕಾರದಲಿ

ನಿಮ್ಮ ಟಿಪ್ಪಣಿ ಬರೆಯಿರಿ