ಪದ್ಯ ೩೯: ಕೌರವರನ್ನು ಕೊಲ್ಲಿಸಲು ಯಾರು ಉಪಾಯ ಮಾಡಿದರೆಂದು ಕೌರವನು ಹೇಳಿದನು?

ಬಣಗುಗಳು ಭೀಮಾರ್ಜುನರು ಕಾ
ರಣಿಕ ನೀ ನಡುವಾಯಿ ಧರ್ಮದ
ಕಣಿ ಯುಧಿಷ್ಠಿರನೆತ್ತಬಲ್ಲನು ನಿನ್ನ ಮಾಯೆಗಳ
ಸೆಣಸನಿಕ್ಕಿದೆ ನಮ್ಮೊಳಗೆ ಧಾ
ರುಣಿಯ ಭಾರವ ಬಿಡಿಸಲೋಸುಗ
ರಣವ ಹೊತ್ತಿಸಿ ನಮ್ಮ ಬೇಂಟೆಯನಾಡಿಸಿದೆಯೆಂದ (ಗದಾ ಪರ್ವ, ೮ ಸಂಧಿ, ೩೯ ಪದ್ಯ)

ತಾತ್ಪರ್ಯ:
ಹೇ ಕೃಷ್ಣ, ಭೀಮಾರ್ಜುನರಾದರೋ ಅಲ್ಪ ವ್ಯಕ್ತಿಗಳು, ನೀನು ನಡುವೆ ಮಾತಾಡಿ ನಮ್ಮಲಿ ವೈರವನ್ನು ಬಿತ್ತಿಸಿದೆ. ಧರ್ಮದ ಗಣಿಯಾದ ಯುಧಿಷ್ಠಿರನಿಗೆ ನಿನ್ನ ಮೋಸವೇನು ತಿಳಿದುದು? ಭೂಮಿಯ ಭಾರವನ್ನು ಕಳೆಯಲು ನಮ್ಮಲ್ಲಿ ಯುದ್ಧವನ್ನು ಮಾಡಿಸಿ ನಮ್ಮನ್ನು ಬೇಟೆಯಾಡಿಸಿದೆ ಎಂದು ದುರ್ಯೋಧನನು ಕೃಷ್ಣನನ್ನು ಜರೆದನು.

ಅರ್ಥ:
ಬಣಗು: ಕೀಳು, ಅಲ್ಪ; ಕಾರಣಿಕ: ಅವತಾರ ಪುರುಷ, ವಿಮರ್ಶಕ; ನಡುವಾಯಿ: ಮಧ್ಯ ಮಾತಾಡು; ಕಣಿ: ಗಣಿ, ಆಕರ, ನೆಲೆ; ಬಲ್ಲನು: ತಿಳಿದನು; ಮಾಯೆ: ಗಾರುಡಿ; ಸೆಣಸು: ಹೋರಾಡು; ಧಾರುಣಿ: ಭೂಮಿ; ಭಾರ: ಹೊರೆ; ಬಿಡಿಸು: ಕಳಚು, ಸಡಿಲಿಸು; ಓಸುಗ: ಓಸ್ಕರ; ರಣ: ಯುದ್ಧ; ಹೊತ್ತಿಸು: ಹಚ್ಚು; ಬೇಂಟೆ: ಬೇಟೆ, ಕೊಲ್ಲು;

ಪದವಿಂಗಡಣೆ:
ಬಣಗುಗಳು +ಭೀಮಾರ್ಜುನರು +ಕಾ
ರಣಿಕ +ನೀ +ನಡುವಾಯಿ +ಧರ್ಮದ
ಕಣಿ +ಯುಧಿಷ್ಠಿರನ್+ಎತ್ತಬಲ್ಲನು+ ನಿನ್ನ+ ಮಾಯೆಗಳ
ಸೆಣಸನಿಕ್ಕಿದೆ +ನಮ್ಮೊಳಗೆ+ ಧಾ
ರುಣಿಯ +ಭಾರವ+ ಬಿಡಿಸಲೋಸುಗ
ರಣವ +ಹೊತ್ತಿಸಿ+ ನಮ್ಮ +ಬೇಂಟೆಯನ್+ಆಡಿಸಿದೆಯೆಂದ

ಅಚ್ಚರಿ:
(೧) ಯುಧಿಷ್ಠಿರನನ್ನು ಹೊಗಳುವ ಪರಿ – ಧರ್ಮದ ಕಣಿ
(೨) ಯುದ್ಧವನ್ನು ಮಾಡಿಸಿದ ಕಾರಣ – ಧಾರುಣಿಯ ಭಾರವ ಬಿಡಿಸಲೋಸುಗ ರಣವ ಹೊತ್ತಿಸಿ ನಮ್ಮ ಬೇಂಟೆಯನಾಡಿಸಿದೆ

ನಿಮ್ಮ ಟಿಪ್ಪಣಿ ಬರೆಯಿರಿ