ಪದ್ಯ ೪೧: ಬಲರಾಮನು ಕೃಷಂಗೆ ಏನು ಹೇಳಿದನು?

ದುಗುಡದಲಿ ಹರಿ ರೌಹಿಣೀಯನ
ಮೊಗವ ನೋಡಿದಡಾತನಿದು ಕಾ
ಳೆಗವಲೇ ಕೃತಸಮಯರಾದಿರಿ ಪೂರ್ವಕಾಲದಲಿ
ಹಗೆಯ ಬಿಡಿ ಕುರುಪತಿಯ ಸಂಧಿಗೆ
ಸೊಗಸಿ ನಿಲಲಿ ಯುಧಿಷ್ಠಿರನ ಮಾ
ತುಗಳ ಕೆಡಿಸದಿರೆಂದನಾ ಕೃಷಂಗೆ ಬಲರಾಮ (ಗದಾ ಪರ್ವ, ೭ ಸಂಧಿ, ೪೧ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ದುಃಖಿಸುತ್ತಾ ಬಲರಾಮನ ಕಡೆಗೆ ನೋಡಲು, ಅವನು, ಇದು ಯುದ್ಧ, ಹಿಂದೆ ನೀವು ಗೆದ್ದಿದ್ದಿರಿ, ಈಗ ನಿಮ್ಮ ಕಾಲ ಕೆಟ್ಟಿತು, ವೈರವನ್ನು ಬಿಟ್ಟು ಕೌರವನೊಂದಿಗೆ ಸಂಧಿಯನ್ನು ಮಾಡಿಕೊಳ್ಳಿರಿ, ಧರ್ಮಜನ ಮಾತನ್ನು ಕೆಡಿಸಬೇಡಿ ಎಂದನು.

ಅರ್ಥ:
ದುಗುಡ: ದುಃಖ; ಹರಿ: ವಿಷ್ಣು; ರೌಹಿಣೀಯ: ಬಲರಾಮ; ಮೊಗ: ಮುಖ; ನೋಡು: ವೀಕ್ಷಿಸು; ಕಾಳೆಗ: ಯುದ್ಧ; ಕೃತ: ಕಾರ್ಯ; ಸಮಯ: ಕಾಲ; ಪೂರ್ವ: ಹಿಂದಿನ; ಹಗೆ: ವೈರಿ; ಬಿಡಿ: ತೊರೆ; ಸಂಧಿ: ರಾಜಿ, ಒಡಂಬಡಿಕೆ; ಸೊಗಸು: ಅಂದ, ಚೆಲುವು; ನಿಲುವು: ಅಭಿಪ್ರಾಯ, ಅಭಿಮತ; ನಿಲು: ತಡೆ; ಮಾತು: ನುಡಿ; ಕೆಡಸು: ಹಾಳುಮಾಡು;

ಪದವಿಂಗಡಣೆ:
ದುಗುಡದಲಿ +ಹರಿ +ರೌಹಿಣೀಯನ
ಮೊಗವ +ನೋಡಿದಡ್+ಆತನ್+ಇದು +ಕಾ
ಳೆಗವಲೇ +ಕೃತ+ಸಮಯರಾದಿರಿ +ಪೂರ್ವಕಾಲದಲಿ
ಹಗೆಯ +ಬಿಡಿ +ಕುರುಪತಿಯ +ಸಂಧಿಗೆ
ಸೊಗಸಿ +ನಿಲಲಿ +ಯುಧಿಷ್ಠಿರನ+ ಮಾ
ತುಗಳ +ಕೆಡಿಸದಿರ್+ಎಂದನಾ +ಕೃಷಂಗೆ +ಬಲರಾಮ

ಅಚ್ಚರಿ:
(೧) ಬಲರಾಮನ ಕಿವಿಮಾತು – ಹಗೆಯ ಬಿಡಿ ಕುರುಪತಿಯ ಸಂಧಿಗೆ ಸೊಗಸಿ ನಿಲಲಿ
(೨) ರೌಹಿಣೀಯ – ಬಲರಾಮನನ್ನು ಕರೆದ ಪರಿ

ನಿಮ್ಮ ಟಿಪ್ಪಣಿ ಬರೆಯಿರಿ