ಪದ್ಯ ೩೬: ಕೌರವನ ಹೊಡೆತದಿಂದ ಭೀಮನ ಸ್ಥಿತಿ ಹೇಗಿತ್ತು?

ಮತ್ತೆ ಹೊಯ್ದನು ಭೀಮಸೇನನ
ನೆತ್ತಿಯನು ನಿಪ್ಪಸರದಲಿ ಕಳೆ
ಹತ್ತಿ ಝೋಂಪಿಸಿ ತಿರುಗಿ ಬಿದ್ದನು ಬಿಗಿದ ಮೂರ್ಛೆಯಲಿ
ಕೆತ್ತ ಕಂಗಳ ಸುಯ್ಲ ಲಹರಿಯ
ಸುತ್ತಲೊಗುವರುಣಾಂಬುಗಳ ಕೆಲ
ದತ್ತ ಸಿಡಿದಿಹ ಗದೆಯ ಭಟನೊರಗಿದನು ಮರವೆಯಲಿ (ಗದಾ ಪರ್ವ, ೭ ಸಂಧಿ, ೩೬ ಪದ್ಯ)

ತಾತ್ಪರ್ಯ:
ಕೌರವನು ಮತ್ತೆ ಭೀಮನ ನೆತ್ತಿಯನ್ನು ಸರ್ವಶಕ್ತಿಯಿಂದಲೂ ಹೊಡೆಯಲು, ಭೀಮನು ಓಲಿ ಮೂರ್ಛೆಯಿಮ್ದ ಕೆಳಬಿದ್ದನು. ಕಣ್ಣುಗಳು ನೆಟ್ಟವು. ಉಸಿರಾಡುವಾಗ ರಕ್ತದ ಹನಿಗಳು ಒಸರಿಸಿದವು. ಗದೆ ಪಕ್ಕಕ್ಕೆ ಹಾರಿತು, ಭೀಮನು ನೆಲದ ಮೇಲೊರಗಿದನು.

ಅರ್ಥ:
ಮತ್ತೆ: ಪುನಃ; ಹೊಯ್ದು: ಹೊಡೆ; ನೆತ್ತಿ: ಶಿರ; ನಿಪ್ಪಸರ: ಅತಿಶಯ, ಹೆಚ್ಚಳ; ಕಳೆ: ಬೀಡು, ತೊರೆ, ಹೋಗಲಾಡಿಸು; ಝೋಂಪು: ಮೂರ್ಛೆ; ತಿರುಗು: ಹೊರಲಾಡು; ಬಿದ್ದು: ಎರಗು, ಬೀಳು; ಬಿಗಿ: ಕಟ್ಟು, ಬಂಧಿಸು; ಮೂರ್ಛೆ: ಎಚ್ಚರವಿಲ್ಲದ ಸ್ಥಿತಿ; ಕೆತ್ತು: ನಡುಕ, ಸ್ಪಂದನ; ಕಂಗಳು: ಕಣ್ಣು; ಸುಯ್ಲು: ನಿಟ್ಟುಸಿರು; ಲಹರಿ: ರಭಸ, ಆವೇಗ; ಸುತ್ತಲು: ಎಲ್ಲಾಕಡೆ; ಅರುಣಾಂಬು: ರಕ್ತ; ಸಿಡಿ: ಹಾರು; ಗದೆ: ಮುದ್ಗರ; ಭಟ: ಸೈನಿಕ; ಒರಗು: ಕೆಳಕ್ಕೆ ಬಾಗು; ಮರವೆ: ಮರವು, ಜ್ಞಾಪಕವಿಲ್ಲದಿರುವುದು;

ಪದವಿಂಗಡಣೆ:
ಮತ್ತೆ +ಹೊಯ್ದನು +ಭೀಮಸೇನನ
ನೆತ್ತಿಯನು +ನಿಪ್ಪಸರದಲಿ +ಕಳೆ
ಹತ್ತಿ+ ಝೋಂಪಿಸಿ +ತಿರುಗಿ +ಬಿದ್ದನು +ಬಿಗಿದ +ಮೂರ್ಛೆಯಲಿ
ಕೆತ್ತ+ ಕಂಗಳ +ಸುಯ್ಲ+ ಲಹರಿಯ
ಸುತ್ತಲೊಗುವ್+ಅರುಣಾಂಬುಗಳ +ಕೆಲ
ದತ್ತ +ಸಿಡಿದಿಹ +ಗದೆಯ +ಭಟನ್+ಒರಗಿದನು+ಮರವೆಯಲಿ

ಅಚ್ಚರಿ:
(೧) ಮೂರ್ಛೆ, ಮರವೆ – ಸಾಮ್ಯಾರ್ಥ ಪದ
(೨) ಭೀಮನನ್ನು ಗದೆಯ ಭಟ ಎಂದು ಕರೆದಿರುವುದು

ನಿಮ್ಮ ಟಿಪ್ಪಣಿ ಬರೆಯಿರಿ