ಪದ್ಯ ೨೮: ಪಾಂಡವರೇಕೆ ಸಂತಸ ಪಟ್ಟರು?

ಹಾರಿತೊಂದೆಸೆಗಾಗಿ ಗದೆ ಮೈ
ಹೇರಿತುರು ಘಾಯವನು ಮೊಳಕಾ
ಲೂರಿ ಬಿದ್ದನು ವದನದಲಿ ವೆಂಠಣಿಸೆ ರಣಧೂಳಿ
ಕಾರಿದನು ರಕುತವನು ಕೌರವ
ನೇರು ಬಲುಹೋ ಹೋದನೆನುತವೆ
ಚೀರಿತಾ ಪರಿವಾರ ಸುಮ್ಮಾನದ ಸಘಾಡದಲಿ (ಗದಾ ಪರ್ವ, ೭ ಸಂಧಿ, ೨೮ ಪದ್ಯ)

ತಾತ್ಪರ್ಯ:
ಕೌರವನ ಕೈಯ ಗದೆ ಒಂದು ಕಡೆಗೆ ಹಾರಿಹೋಯಿತು. ಅತಿಶಯವಾದ ಗಾಯವಾಗಿ, ಕೌರವನು ಮೊಣಕಾಲನ್ನೂರಿ ಬಿದ್ದನು. ಅವನ ಮುಖಕ್ಕೆ ಧೂಳು ಮೆತ್ತಿತು. ಅವನು ರಕ್ತವನ್ನು ಕಾರಿದನು. ಕೌರವನಿಗೆ ಬಹಳ ಗಾಯವಾಯಿತು. ಅವನು ಹೋದ ಎಂದುಕೊಂಡು ಪಾಂಡವ ಪರಿವಾರದವರು ಅತಿಶಯ ಸಂತೋಷವನ್ನು ತಾಳಿದರು.

ಅರ್ಥ:
ಹಾರು: ಲಂಘಿಸು, ಜಿಗಿ; ದೆಸೆ: ದಿಕ್ಕು; ಗದೆ: ಮುದ್ಗರ; ಮೈ: ತನು, ದೇಹ; ಹೇರು: ಹೊರೆ, ಭಾರ; ಉರು: ಹೆಚ್ಚು; ಘಾಯ: ಪೆಟ್ತು; ಮೊಳಕಾಲು: ಮಂಡಿ; ಊರು: ನೆಲೆಸು; ಬಿದ್ದು: ಜಾರು; ವದನ: ಮುಖ; ವೆಂಠಣಿಸು: ಮುತ್ತಿಗೆ ಹಾಕು, ಸುತ್ತುವರಿ; ರಣ: ಯುದ್ಧ; ಧೂಳು: ಮಣ್ಣಿನ ಪುಡಿ; ಕಾರು: ಕೆಸರು; ರಕುತ: ನೆತ್ತರು; ಬಲುಹ: ಶಕ್ತಿ; ಹೋಗು: ತೆರಳು; ಚೀರು: ಗರ್ಜಿಸು; ಪರಿವಾರ: ಸಂಬಂಧಿಕರು; ಸುಮ್ಮಾನ: ಸಂತಸ; ಸಘಾಡ: ರಭಸ;

ಪದವಿಂಗಡಣೆ:
ಹಾರಿತೊಂದ್ +ದೆಸೆಗಾಗಿ +ಗದೆ +ಮೈ
ಹೇರಿತ್+ಉರು +ಘಾಯವನು +ಮೊಳಕಾಲ್
ಊರಿ+ ಬಿದ್ದನು+ ವದನದಲಿ +ವೆಂಠಣಿಸೆ +ರಣಧೂಳಿ
ಕಾರಿದನು +ರಕುತವನು +ಕೌರವನ್
ಏರು +ಬಲುಹೋ +ಹೋದನೆನುತವೆ
ಚೀರಿತ್+ಆ +ಪರಿವಾರ +ಸುಮ್ಮಾನದ +ಸಘಾಡದಲಿ

ಅಚ್ಚರಿ:
(೧) ಕೌರವನು ಬಿದ್ದ ಪರಿ – ಮೊಳಕಾಲೂರಿ ಬಿದ್ದನು ವದನದಲಿ ವೆಂಠಣಿಸೆ ರಣಧೂಳಿ
(೨) ಸ ಕಾರದ ಜೋಡಿ ಪದ – ಸುಮ್ಮಾನದ ಸಘಾಡದಲಿ