ಪದ್ಯ ೨೫: ಪಾಂಡವರೇಕೆ ಅಳಲಿದರು?

ಒಲೆದು ಬಿದ್ದನು ಭೀಮ ಕುಲಗಿರಿ
ಮಲಗುವಂದದಲೇರಬಾಯಿಂ
ದಿಳಿವ ಶೋಣಿತಧಾರೆ ಮಗ್ಗುಲ ಮುಸುಕಿತವನಿಯಲಿ
ಎಲೆ ಮಹಾದೇವಾ ವೃಕೋದರ
ನಳಿದನೇ ಹಾ ಭೀಮ ಹಾಯೆಂ
ದಳಲಿದುದು ಪರಿವಾರ ಸಾತ್ಯಕಿ ಸೃಂಜಯಾದಿಗಳು (ಗದಾ ಪರ್ವ, ೭ ಸಂಧಿ, ೨೫ ಪದ್ಯ)

ತಾತ್ಪರ್ಯ:
ಕುಲಗಿರಿಯು ಉರುಳ್ವಂತೆ ಭೀಮನು ಒಲೆದು ಬಿದ್ದನು. ಅವನ ಬಾಯಿಂದ ರಕ್ತ ಸುರಿದು ನೆಲ ನೆನೆಯಿತು. ಶಿವಶಿವಾ ಭೀಮನು ಮಡಿದನೇ! ಹಾ ಭೀಮಾ ಎಂದು ಸಾತ್ಯಕಿ ಸಂಜಯ ಮೊದಲಾದ ಪರಿವಾರದವರು ದುಃಖಿಸಿದರು.

ಅರ್ಥ:
ಒಲೆದು: ತೂಗಾಡು; ಬಿದ್ದು: ಬೀಳು; ಕುಲಗಿರಿ: ದೊಡ್ಡ ಬೆಟ್ಟ; ಮಲಗು: ನಿದ್ರಿಸು; ಇಳಿ: ಜಾರು; ಶೋಣಿತ: ರಕ್ತ; ಧಾರೆ: ವರ್ಷ; ಮಗ್ಗುಲು: ಪಕ್ಕ, ಪಾರ್ಶ್ವ; ಮುಸುಕು: ಹೊದಿಕೆ; ಯೋನಿ; ಅವನಿ: ಭೂಮಿ; ಅಳಿ: ಸಾವು; ಅಳಲು: ದುಃಖಿಸು; ಪರಿವಾರ: ಬಂಧುಜನ; ಆದಿ: ಮುಂತಾದ; ಏರ: ಆರೋಹಿಸು;

ಪದವಿಂಗಡಣೆ:
ಒಲೆದು +ಬಿದ್ದನು+ ಭೀಮ +ಕುಲಗಿರಿ
ಮಲಗುವಂದದಲ್+ಏರ+ಬಾಯಿಂ
ದಿಳಿವ +ಶೋಣಿತ+ಧಾರೆ +ಮಗ್ಗುಲ +ಮುಸುಕಿತ್+ಅವನಿಯಲಿ
ಎಲೆ +ಮಹಾದೇವಾ +ವೃಕೋದರನ್
ಅಳಿದನೇ +ಹಾ +ಭೀಮ +ಹಾಯೆಂದ್
ಅಳಲಿದುದು +ಪರಿವಾರ +ಸಾತ್ಯಕಿ+ ಸೃಂಜಯ+ಆದಿಗಳು

ಅಚ್ಚರಿ:
(೧) ರೂಪಕದ ಪ್ರಯೋಗ – ಒಲೆದು ಬಿದ್ದನು ಭೀಮ ಕುಲಗಿರಿ ಮಲಗುವಂದದಲ್

ನಿಮ್ಮ ಟಿಪ್ಪಣಿ ಬರೆಯಿರಿ