ಏನನೆಂಬೆನು ಜೀಯ ಕುರುಪತಿ
ಯಾನುವನು ಕಲಿಭೀಮನುಬ್ಬೆಯ
ನಾನುವನು ದುರಿಯೋಧನನ ಥಟ್ಟಣೆಯನಾ ಭೀಮ
ದಾನವರು ಮಾನವರೊಳಿನ್ನು ಸ
ಘಾನರಾರಿವರಂತೆ ಪಾಂಡವ
ರ್ಗೇನಸಾಧ್ಯವು ವೀರನಾರಾಯಣನ ಕರುಣದಲಿ (ಗದಾ ಪರ್ವ, ೬ ಸಂಧಿ, ೩೫ ಪದ್ಯ)
ತಾತ್ಪರ್ಯ:
ಒಡೆಯಾ, ಭೀಮನೂ ದುರ್ಯೋಧನರೂ ಒಬ್ಬರನ್ನೊಬ್ಬರು ಎದುರಿಸುವುದನ್ನು, ಅವರಿಬ್ಬರ ಹೊಡೆತಗಳನ್ನು ಹೇಗೆ ವರ್ಣಿಸಲಿ? ಇವರಂಥ ವೀರರು ದಾನವ ಮಾನವರಲ್ಲಿ ಯಾರಿದ್ದಾರೆ? ಶ್ರೀಕೃಷ್ಣನ ಕರುಣೆಯಿಂದ ಪಾಂಡವರಿಗೆ ಯಾವುದು ತಾನೇ ಅಸಾಧ್ಯವಾದುದು.
ಅರ್ಥ:
ಜೀಯ: ಒಡೆಯ; ಆನು: ಎದುರಿಸು; ಕಲಿ: ಶೂರ; ಉಬ್ಬೆ: ಅಧಿಕ, ಹೆಚ್ಚಳ; ಥಟ್ಟಣೆ: ಗುಂಪು; ದಾನವ: ರಾಕ್ಷಸ; ಮಾನವ: ಮನುಷ್ಯ; ಸಘಾನ: ಸಮಾನ; ಅಸಾಧ್ಯ: ಶಕ್ಯವಲ್ಲದುದು; ಕರುಣ: ದಯೆ;
ಪದವಿಂಗಡಣೆ:
ಏನನೆಂಬೆನು+ ಜೀಯ +ಕುರುಪತಿ
ಆನುವನು +ಕಲಿಭೀಮನ್+ಉಬ್ಬೆಯನ್
ಆನುವನು +ದುರಿಯೋಧನನ +ಥಟ್ಟಣೆಯನ್+ಆ+ ಭೀಮ
ದಾನವರು +ಮಾನವರೊಳ್+ಇನ್ನು+ ಸ
ಘಾನರ್+ಆರ್+ಇವರಂತೆ +ಪಾಂಡವರ್ಗ್
ಏನ್+ಅಸಾಧ್ಯವು+ ವೀರನಾರಾಯಣನ +ಕರುಣದಲಿ
ಅಚ್ಚರಿ:
(೧) ಆನುವನು – ೨, ೩ ಸಾಲಿನ ಮೊದಲ ಪದ
(೨) ಭಗವಂತನ ಕೃಪೆಯ ಮಹತ್ವ – ಪಾಂಡವರ್ಗೇನಸಾಧ್ಯವು ವೀರನಾರಾಯಣನ ಕರುಣದಲಿ