ಚಿತ್ತವಿಸು ಬಲರಾಮ ರಿಪುಗಳ
ತೆತ್ತಿಗನೆ ಲೇಸಾಗಿ ನೋದು ನೃ
ಪೋತ್ತಮರು ಪಾಂಚಾಲ ಸೃಂಜಯ ಸೋಮಕಾದಿಗಳು
ಇತ್ತಲಭಿಮುಖವಾಗಿ ರಥಿಕರು
ಮತ್ತ ಗಜದಾರೋಹಕರು ರಾ
ವುತ್ತರೀಕ್ಷಿಸಿ ನಮ್ಮ ಸಮರವನೆಂದನವನೀಶ (ಗದಾ ಪರ್ವ, ೬ ಸಂಧಿ, ೧೪ ಪದ್ಯ)
ತಾತ್ಪರ್ಯ:
ದುರ್ಯೋಧನನು ಮಾತನಾಡುತ್ತಾ, ಬಲರಾಮ ಗಮನವಿಟ್ಟು ನೋದು, ಶತ್ರುಗಳ ಪೋಷಕನೇ ಆದ ಶ್ರೀಕೃಷ್ಣನೇ ಚೆನ್ನಾಗಿ ನೋಡು, ಪಾಂಚಾಲ, ಸೃಂಜಯ, ಸೋಮಕಾದಿ ರಾಜರೇ ನೋಡಿರಿ, ರಥಿಕರು, ಜೋದರು, ರಾವುತರು ನಮ್ಮ ಕಾಳಗದ ಕಣಕ್ಕೆ ಅಭಿಮುಖರಾಗಿ ನಮ್ಮ ಕಾಳಗವನ್ನು ನೋಡಿರಿ ಎಂದು ಹೇಳಿದನು.
ಅರ್ಥ:
ಚಿತ್ತವಿಸು: ಗಮನವಿಟ್ಟು ಕೇಳು; ರಿಪು: ವೈರಿ; ತೆತ್ತು: ಕುಂದಣಿಸು; ಲೇಸು: ಒಳಿತು; ನೋಡು: ವೀಕ್ಷಿಸು; ನೃಪ: ರಾಜ; ಉತ್ತಮ: ಶ್ರೇಷ್ಠ; ಆದಿ: ಮುಂತಾದ; ಅಭಿಮುಖ: ಎದುರು; ರಥಿಕ: ರಥಿ; ಮತ್ತ: ಅಮಲು; ಗಜ: ಆನೆ; ಆರೋಹಕ: ಮೇಲೇರು; ರಾವುತ: ಕುದುರೆ ಸವಾರ; ಈಕ್ಷಿಸು: ನೋಡು; ಸಮರ: ಯುದ್ಧ; ಅವನೀಶ: ರಾಜ;
ಪದವಿಂಗಡಣೆ:
ಚಿತ್ತವಿಸು +ಬಲರಾಮ +ರಿಪುಗಳ
ತೆತ್ತಿಗನೆ+ ಲೇಸಾಗಿ +ನೋಡು+ ನೃ
ಪೋತ್ತಮರು +ಪಾಂಚಾಲ +ಸೃಂಜಯ +ಸೋಮಕಾದಿಗಳು
ಇತ್ತಲ್+ಅಭಿಮುಖವಾಗಿ +ರಥಿಕರು
ಮತ್ತ+ ಗಜದ್+ಆರೋಹಕರು +ರಾ
ವುತ್ತರ್+ಈಕ್ಷಿಸಿ+ ನಮ್ಮ+ ಸಮರವನೆಂದನ್+ಅವನೀಶ
ಅಚ್ಚರಿ:
(೧) ಕೃಷ್ಣನನ್ನು ರಿಪುಗಳ ತೆತ್ತಿಗನೆ ಎಂದು ಕರೆದಿರುವುದು