ಪದ್ಯ ೨೪: ಭೀಮನು ಹೇಗೆ ಕೌರವನನ್ನು ಪ್ರಚೋದಿಸಿದನು – ೧?

ವಿಷವನಿಕ್ಕಿದೆ ಹಾವಿನಲಿ ಬಂ
ಧಿಸಿದೆ ಮಡುವಿನೊಳಿಕ್ಕಿ ಬಳಿಕು
ಬ್ಬಸವ ಮಾಡಿದೆ ಹಿಂದೆ ಮನಮುನಿಸಾಗಿ ಬಾಲ್ಯದಲಿ
ವಸತಿಯಲಿ ಬಳಿಕಗ್ನಿ ದೇವರ
ಪಸರಿಸಿದೆ ಪುಣ್ಯದಲಿ ನಾವ್ ಜೀ
ವಿಸಿದೆವಡಗಿದಡಿನ್ನು ಬಿಡುವೆನೆಯೆಂದನಾ ಭೀಮ (ಗದಾ ಪರ್ವ, ೫ ಸಂಧಿ, ೨೪ ಪದ್ಯ)

ತಾತ್ಪರ್ಯ:
ಎಲೈ ಕೌರವ, ಹಿಂದೆ ಬಾಲಯ್ದಲ್ಲಿ ನನಗೆ ವಿಷವನ್ನಿಟ್ಟೆ, ಹಾವಿನಿಂದ ಕಟ್ಟಿಹಾಕಿದೆ. ಮಡುವಿನಲ್ಲಿ ಮುಳುಗಿಸಿದೆ. ಬಳಿಕ ಅರಗಿನ ಮನೆಗೆ ಬೆಂಕಿ ಹಚ್ಚಿದೆ ಪುಣ್ಯದಿಂದ ನಾವು ಬದುಕಿಕೊಂಡೆವು. ನೀರಿನಲ್ಲಿ ಮುಳುಗಿದರೆ ಈಗ ಬಿಟ್ಟೇನೇ ಎಂದು ಭೀಮನು ಕೌರವನನ್ನು ಪ್ರಚೋದಿಸಿದನು.

ಅರ್ಥ:
ವಿಷ: ಗರಳ; ಹಾವು: ಉರಗ; ಬಂಧಿಸು: ಕಟ್ಟು, ಸೆರೆ; ಮಡು: ನದಿ, ಹೊಳೆ ಮುಂ.ವುಗಳಲ್ಲಿ ಆಳವಾದ ನೀರಿರುವ ಪ್ರದೇಶ; ಉಬ್ಬಸ: ಸಂಕಟ, ಮೇಲುಸಿರು; ಬಳಿಕ: ನಂತರ; ಹಿಂದೆ: ಗತಿಸಿದ ಕಾಲ; ಮನ: ಮನಸ್ಸು; ಮುನಿಸು: ಕೋಪ; ಬಾಲ್ಯ: ಚಿಕ್ಕವ; ವಸತಿ: ವಾಸಮಾಡುವಿಕೆ; ಅಗ್ನಿ: ಬೆಂಕಿ; ಪಸರಿಸು: ಹರಡು; ಪುಣ್ಯ: ಸದಾಚಾರ; ಜೀವಿಸು: ಬದುಕು; ಅಡಗು: ಅವಿತುಕೊಳ್ಳು; ಬಿಡು: ತೊರೆ;

ಪದವಿಂಗಡಣೆ:
ವಿಷವನಿಕ್ಕಿದೆ +ಹಾವಿನಲಿ +ಬಂ
ಧಿಸಿದೆ +ಮಡುವಿನೊಳಿಕ್ಕಿ +ಬಳಿಕ್
ಉಬ್ಬಸವ +ಮಾಡಿದೆ +ಹಿಂದೆ +ಮನ+ಮುನಿಸಾಗಿ +ಬಾಲ್ಯದಲಿ
ವಸತಿಯಲಿ +ಬಳಿಕ್+ಅಗ್ನಿ+ ದೇವರ
ಪಸರಿಸಿದೆ +ಪುಣ್ಯದಲಿ +ನಾವ್ +ಜೀ
ವಿಸಿದೆವ್+ಅಡಗಿದಡ್+ಇನ್ನು +ಬಿಡುವೆನೆ+ಎಂದನಾ +ಭೀಮ

ಅಚ್ಚರಿ:
(೧) ಮನೆಗೆ ಬೆಂಕಿ ಹಚ್ಚಿದೆ ಎಂದು ಹೇಳುವ ಪರಿ – ವಸತಿಯಲಿ ಬಳಿಕಗ್ನಿ ದೇವರಪಸರಿಸಿದೆ

ನಿಮ್ಮ ಟಿಪ್ಪಣಿ ಬರೆಯಿರಿ