ಪದ್ಯ ೨೨: ದುರ್ಯೋಧನನೇಕೆ ಹಿಂದಿನ ರಾಜರಿಗೆ ಸಮನಲ್ಲ?

ಭರತ ನಹುಷ ಯಯಾತಿ ನಳ ಸಂ
ವರಣ ಸಗರ ದಿಳೀಪ ನೃಗ ರಘು
ವರ ಪುರೂರವ ದುಂದುಮಾರ ಭಗೀರಥಾದಿಗಳು
ಧರಣಿಪಾಲರನಂತಸಮರದೊ
ಳರಿಬಲವ ಸವರಿದರು ನಿನ್ನೊವೊ
ಲುರುಳಿದವರಾರುದಕದಲಿ ನೃಪ ಕೈದುಗೊಳ್ಳೆಂದ (ಗದಾ ಪರ್ವ, ೫ ಸಂಧಿ, ೨೨ ಪದ್ಯ)

ತಾತ್ಪರ್ಯ:
ಭರತ, ನಹುಷ, ಯಯಾತಿ, ನಳ, ಸಂವರಣ, ಸಗರ, ದಿಲೀಪ, ನೃಗ, ರಘು, ಪುರೂರವ, ದುಂದುಮಾರ, ಭಗೀರಥ ಮೊದಲಾದ ಲೆಕ್ಕವಿಲ್ಲದಷ್ಟು ವೀರರು ಯುದ್ಧದಲ್ಲಿ ಶತ್ರುಗಳನ್ನು ಸಂಹರಿಸಿದರು. ನಿನ್ನಂತೆ ಯಾರೂ ನೀರಿನಲ್ಲಿ ಬೀಳಲಿಲ್ಲ, ಎದ್ದೇಳು ಆಯುಧವನ್ನು ಹಿಡಿ ಎಂದು ಧರ್ಮಜನು ಕೌರವನನ್ನು ಹಂಗಿಸಿದನು.

ಅರ್ಥ:
ಆದಿ: ಮುಂತಾದ; ಧರಣಿಪಾಲ: ರಾಜ; ಸಮರ: ಯುದ್ಧ; ಅರಿ: ವೈರಿ; ಬಲ: ಸೈನ್ಯ; ಸವರು: ನಾಶಮಾಡು; ಉರುಳು: ಬೀಳು; ಉದಕ: ನೀರು; ಕೈದು: ಆಯುಧ;

ಪದವಿಂಗಡಣೆ:
ಭರತ +ನಹುಷ +ಯಯಾತಿ +ನಳ+ ಸಂ
ವರಣ+ ಸಗರ+ ದಿಳೀಪ+ ನೃಗ+ ರಘು
ವರ +ಪುರೂರವ +ದುಂದುಮಾರ +ಭಗೀರಥಾದಿಗಳು
ಧರಣಿಪಾಲರ್+ಅನಂತ+ಸಮರದೊಳ್
ಅರಿಬಲವ +ಸವರಿದರು +ನಿನ್ನೊವೊಲ್
ಉರುಳಿದವರ್+ಆರ್+ಉದಕದಲಿ +ನೃಪ +ಕೈದುಗೊಳ್ಳೆಂದ

ಅಚ್ಚರಿ:
(೧) ಹಂಗಿಸುವ ಪರಿ – ನಿನ್ನೊವೊಲುರುಳಿದವರಾರುದಕದಲಿ
(೨) ನೃಪ, ಧರಣಿಪಾಲ – ಸಮಾನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ