ಪದ್ಯ ೧೫: ಚಂದ್ರವಂಶಕ್ಕೆ ಕೆಟ್ಟ ಹೆಸರೇಕೆ ಬರುತ್ತದೆ?

ಜಾತಿಮಾತ್ರದಮೇಲೆ ಬಂದ
ಖ್ಯಾತಿವಿಖ್ಯಾತಿಗಳು ನಮಗೆನೆ
ಜಾತರಾದೆವು ನಾವು ನಿರ್ಮಳ ಸೋಮವಂಶದಲಿ
ಭೀತಿಯಲಿ ನೀ ನೀರ ಹೊಕ್ಕಡೆ
ಮಾತು ತಾಗದೆ ತಮ್ಮನಕಟಾ
ಬೂತುಗಳ ಕೈಬಾಯ್ಗೆ ಬಂದೈ ತಂದೆ ಕುರುರಾಯ (ಗದಾ ಪರ್ವ, ೫ ಸಂಧಿ, ೧೫ ಪದ್ಯ)

ತಾತ್ಪರ್ಯ:
ನಮ್ಮ ಹುಟ್ಟಿನಿಂದ ಬಂದ ಕೀರ್ತಿ ಪ್ರಸಿದ್ಧಿಗಳು ನಮಗೆ ಬೇಕಲ್ಲವೇ? ಹಾಗಾದರೆ ನಾವು ಹುಟ್ಟಿದ್ದು ನಿರ್ಮಲವಾದ ಚಂದ್ರವಂಶದಲ್ಲಿ. ನೀನು ಹೆದರಿ ಓಡಿ ನೀರಿನಲ್ಲಿ ಅಡಗಿಕೋಂಡರೆ ನಮಗೆ ಕೆಟ್ಟ ಹೆಸರು ಬರುವುದಿಲ್ಲವೇ? ನಾಡಾಡಿಗಳ ಕೈಗೆ ಬಾಯಿಗೆ ನೀನು ಗಾಸವಾಗಿ ಕೆಟ್ಟ ಹೆಸರು ಹೊತ್ತುಕೊಂಡಂತಾಗುವುದಿಲ್ಲವೇ ಎಂದು ಧರ್ಮಜನು ಕೌರವನಿಗೆ ಹೇಳಿದನು.

ಅರ್ಥ:
ಜಾತಿ: ಕುಲ; ಬಂದ: ಪಡೆದ; ಖ್ಯಾತಿ: ಪ್ರಸಿದ್ಧಿ; ವಿಖ್ಯಾತಿ: ಪ್ರಸಿದ್ಧಿ, ಕೀರ್ತಿ; ಜಾತ: ಹುಟ್ಟಿದುದು; ನಿರ್ಮಳ: ಶುದ್ಧ; ಸೋಮ: ಚಂದ್ರ; ವಂಶ: ಕುಲ; ಭೀತಿ: ಭಯ; ಹೊಕ್ಕು: ಸೇರು; ಮಾತು: ನುಡಿ; ತಾಗು: ಮುಟ್ಟು; ಅಕಟ: ಅಯ್ಯೋ; ಬೂತು: ಕುಚೋದ್ಯ, ಕುಚೇಷ್ಟೆ; ಬಂದೈ: ಬರೆಮಾಡು; ತಂದೆ: ಅಪ್ಪ; ರಾಯ: ರಾಜ;

ಪದವಿಂಗಡಣೆ:
ಜಾತಿಮಾತ್ರದಮೇಲೆ +ಬಂದ
ಖ್ಯಾತಿ+ವಿಖ್ಯಾತಿಗಳು +ನಮಗ್+ಎನೆ
ಜಾತರಾದೆವು +ನಾವು +ನಿರ್ಮಳ +ಸೋಮ+ವಂಶದಲಿ
ಭೀತಿಯಲಿ +ನೀ +ನೀರ +ಹೊಕ್ಕಡೆ
ಮಾತು +ತಾಗದೆ+ ತಮ್ಮನ್+ಅಕಟಾ
ಬೂತುಗಳ+ ಕೈಬಾಯ್ಗೆ +ಬಂದೈ +ತಂದೆ +ಕುರುರಾಯ

ಅಚ್ಚರಿ:
(೧) ಕೌರವನ ಸ್ಥಿತಿಯನ್ನು ವರ್ಣಿಸುವ ಪರಿ – ಬೂತುಗಳ ಕೈಬಾಯ್ಗೆ ಬಂದೈ ತಂದೆ ಕುರುರಾಯ

ನಿಮ್ಮ ಟಿಪ್ಪಣಿ ಬರೆಯಿರಿ