ಪದ್ಯ ೪೯: ಶಬರಪತಿಯು ಭೀಮನಲ್ಲಿ ಏನೆಂದು ಕೇಳಿದನು?

ತಂದ ಮಾಂಸದ ಕಂಬಿಗಳು ಪು
ಳಿಂದರೊಪ್ಪಿಸಿ ಭೀಮಸೇನನ
ಮಂದಿರವ ಸಾರಿದರು ಕಂಡರು ಜನದ ಕಳವಳವ
ಇಂದಿನೀ ಸಂಗ್ರಾಮಜಯದಲಿ
ಬಂದ ಜಾಡ್ಯವಿದೇನು ಬಿನ್ನಹ
ವೆಂದು ಸಲುಗೆ ಶಬರಪತಿ ನುಡಿಸಿದನು ಪವನಜನ (ಗದಾ ಪರ್ವ, ೪ ಸಂಧಿ, ೪೯ ಪದ್ಯ)

ತಾತ್ಪರ್ಯ:
ಮಾಂಸದ ಕಂಬಿಗಲನ್ನಿಳಿಸಿ ಬೇಟೆಗಾರರು ಭೀಮನ ಮನೆಗೆ ಹೋಗಿ ಜನರು ಕಳವಳಿಸುತ್ತಿದ್ದುದನ್ನು ಕಂಡರು. ಭೀಮನಲ್ಲಿ ಸಲಿಗೆಯಿಂದಿದ್ದ ಶಬರಪತಿಯು ಒಡೆಯ, ನೀವು ಇಂದಿನ ಯುದ್ಧದಲ್ಲಿ ಜಯಶಾಲಿಗಳಾಗಿದ್ದೀರಿ, ಇಂತಹ ಸಂತೋಷದ ಸಮಯದಲ್ಲಿ ಈ ಕಳವಳದ ಜಾಡ್ಯವೇಕೆ ಎಂದು ಕೇಳಿದನು.

ಅರ್ಥ:
ಮಾಂಸ: ಅಡಗು; ಕಂಬಿ: ಲೋಹದ ತಂತಿ; ಪುಳಿಂದ: ಬೇಡ; ಒಪ್ಪಿಸು: ನೀಡು; ಮಂದಿರ: ಮನೆ; ಸಾರು: ಬಳಿ ಸೇರು, ಹತ್ತಿರಕ್ಕೆ ಬರು; ಕಂಡು: ನೋಡು; ಜನ: ಮನುಷ್ಯರ ಗುಂಪು; ಕಳವಳ: ಗೊಂದಲ; ಸಂಗ್ರಾಮ: ಯುದ್ಧ; ಜಯ: ಗೆಲುವು; ಜಾಡ್ಯ: ನಿರುತ್ಸಾಹ; ಬಿನ್ನಹ: ಕೋರಿಕೆ; ಸಲುಗೆ: ಸದರ, ಅತಿ ಪರಿಚಯ; ಶಬರಪತಿ: ಬೇಟೆಗಾರರ ಒಡೆಯ; ನುಡಿಸು: ಮಾತಾದು; ಪವನಜ: ಭೀಮ;

ಪದವಿಂಗಡಣೆ:
ತಂದ +ಮಾಂಸದ +ಕಂಬಿಗಳು +ಪು
ಳಿಂದರ್+ಒಪ್ಪಿಸಿ +ಭೀಮಸೇನನ
ಮಂದಿರವ +ಸಾರಿದರು +ಕಂಡರು +ಜನದ +ಕಳವಳವ
ಇಂದಿನ್+ಈ+ ಸಂಗ್ರಾಮ+ಜಯದಲಿ
ಬಂದ +ಜಾಡ್ಯವಿದೇನು +ಬಿನ್ನಹ
ವೆಂದು +ಸಲುಗೆ +ಶಬರಪತಿ+ ನುಡಿಸಿದನು +ಪವನಜನ

ಅಚ್ಚರಿ:
(೧) ಸಂತೋಷವಾಗಿಲ್ಲ ಎಂದು ಹೇಳುವ ಪರಿ – ಇಂದಿನೀ ಸಂಗ್ರಾಮಜಯದಲಿ ಬಂದ ಜಾಡ್ಯವಿದೇನು

ನಿಮ್ಮ ಟಿಪ್ಪಣಿ ಬರೆಯಿರಿ