ಪದ್ಯ ೪೭: ದುರ್ಯೊಧನನನ್ನು ಸೈನಿಕರು ಹೇಗೆ ಹುಡುಕಿದರು?

ಹೆಣನ ಬಗಿದರಸಿದರು ಕರಿಗಳ
ಹಣಿದದಲಿ ನೋಡಿದರು ರಥಸಂ
ದಣಿಗಳೊಟ್ಟಿಲ ಕೆದರಿ ಭೀಷ್ಮನ ಸರಳ ಮಂಚದಲಿ
ಹಣುಗಿದರು ಭಗದತ್ತನಾನೆಯ
ನಣೆದುನೋಡಿದರರುಣವಾರಿಯ
ಕೆಣಕಿ ಕೊಡರಸಿದರು ಚಾರರು ಕಳನ ಚೌಕದಲಿ (ಗದಾ ಪರ್ವ, ೪ ಸಂಧಿ, ೪೭ ಪದ್ಯ)

ತಾತ್ಪರ್ಯ:
ದೂತರು ರಣರಂಗದಲ್ಲಿ ಹೆಣಗಳನ್ನು ಕಿತ್ತೆಸೆದು ಹುಡುಕಿದರು. ಆನೆಗಳ ಹೆಣಗಳ ನಡುವೆ, ಭೀಷ್ಮನ ಸರಳ ಮಂಚದಡಿಯಲ್ಲಿ ಭಗದತ್ತನ ಆನೆಯ ಹಿಂದೆ, ಮುಂದೆ ರಕ್ತದ ಮಡುಗಳ ನಡುವೆ ದೂತರು ದುರ್ಯೋಧನನನ್ನು ಹುಡುಕಿದರು.

ಅರ್ಥ:
ಹೆಣ: ಜೀವವಿಲ್ಲದ ಶರೀರ; ಬಗಿ: ಸೀಳು; ಅರಸು: ಹುಡುಕು; ಕರಿ: ಆನೆ; ಹಣಿ: ಬಾಗು, ಮಣಿ, ತುಂಡುಮಾಡು; ನೋಡು: ವೀಕ್ಷಿಸು; ರಥ: ಬಂಡಿ; ಸಂದಣಿ: ಗುಂಪು, ಸಮೂಹ; ಕೆದರು: ಹರಡು; ಸರಳ: ಬಾಣ; ಮಂಚ: ಪಲ್ಲಂಗ; ಹಣುಗು: ಹಿಂಜರಿ; ಅಣೆ: ಹೊಡೆ; ಅರುಣವಾರಿ: ರಕ್ತ, ಕೆಂಪುನೀರು; ಕೆಣಕು: ಕೆದಕು, ಪ್ರಚೋದಿಸು; ಅಸಿ: ಈಡಾಡು; ಚಾರ: ದುತರು; ಕಳ: ಯುದ್ಧರಂಗ; ಚೌಕ: ಮೇರೆ, ಎಲ್ಲೆ;

ಪದವಿಂಗಡಣೆ:
ಹೆಣನ +ಬಗಿದ್+ಅರಸಿದರು+ ಕರಿಗಳ
ಹಣಿದದಲಿ +ನೋಡಿದರು+ ರಥ+ಸಂ
ದಣಿಗಳ್+ಒಟ್ಟಿಲ +ಕೆದರಿ +ಭೀಷ್ಮನ +ಸರಳ +ಮಂಚದಲಿ
ಹಣುಗಿದರು +ಭಗದತ್ತನ್+ಆನೆಯನ್
ಅಣೆದು+ನೋಡಿದರ್+ಅರುಣವಾರಿಯ
ಕೆಣಕಿ +ಕೊಡರ್+ಅಸಿದರು +ಚಾರರು +ಕಳನ +ಚೌಕದಲಿ

ಅಚ್ಚರಿ:
(೧) ಹಣಿ, ಸಂದಣಿ – ಪ್ರಾಸ ಪದ
(೨) ಹೆಣ, ಹಣಿ, ಹಣುಗಿ – ಹ ಕಾರದ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ