ಪದ್ಯ ೩೯: ದುರ್ಯೋಧನನು ತನ್ನನ್ನು ಅರಗೆಲಸಿ ಎಂದೇಕೆ ಹೇಳಿದನು?

ಖರೆಯರೈ ನೀವುಭಯ ರಾಯರ
ಗುರುಗಳದು ಕುಂದಿಲ್ಲ ಕೃಪನೇ
ಹಿರಿಯನಾಚಾರಿಯನು ಯಾದವರೊಳಗೆ ಕೃತವರ್ಮ
ಗರುವರೈ ನೀವಿಲ್ಲಿ ರಣಬಾ
ಹಿರರೆ ಸಾಕಂತಿರಲಿ ಸುಕೃತದೊ
ಳರಗೆಲಸಿಗಳು ನಾವೆ ನಿಮ್ಮಲಿ ಕೊರತೆಯಿಲ್ಲೆಂದ (ಗದಾ ಪರ್ವ, ೪ ಸಂಧಿ, ೩೯ ಪದ್ಯ)

ತಾತ್ಪರ್ಯ:
ದುರ್ಯೋಧನನು ಉತ್ತರಿಸುತ್ತಾ, ನಿಮ್ಮ ಮಾತು ನಿಜ, ನೀವು ಶ್ರೇಷ್ಠರು. ಉಭಯ ರಾಜರ ಗುರುಗಳು, ಕೃಪನು ನಮ್ಮ ಹಿರಿಯಗುರು. ಯಾದವರಲ್ಲಿ ಕೃತವರ್ಮನು ಅಗ್ರಗಣ್ಯ. ನೀವು ಯುದ್ಧದಲ್ಲಿ ಅರ್ಹರಲ್ಲ ಎನ್ನುತ್ತಿಲ್ಲ, ನಾವು ಅರೆ ಬರೆ ಪುಣ್ಯಶಾಲಿಗಳೆಂಬುದೇ ಕೊರತೆ, ನಿಮ್ಮಲ್ಲಿ ಏನೂ ನ್ಯೂನ್ಯತೆಗಳಿಲ್ಲ ಎಂದು ಕೌರವನು ನುಡಿದನು.

ಅರ್ಥ:
ಖರೆ: ನಿಜ; ಉಭಯ: ಎರದು; ರಾಯ: ರಾಜ; ಗುರು: ಆಚಾರ್ಯ; ಕುಂದು: ಕೊರತೆ, ನ್ಯೂನ್ಯತೆ; ಹಿರಿ: ದೊಡ್ಡವ; ಆಚಾರಿ: ಗುರು; ಗರುವ: ಹಿರಿಯ, ಶ್ರೇಷ್ಠ; ರಣ: ಯುದ್ಧ; ಬಾಹಿರ: ಬಹಿಷ್ಕೃತವಾದ, ಹೊರತಾದುದು; ಸಾಕು: ಅಗತ್ಯ ಪೂರೈಸಿತು; ಸುಕೃತ: ಒಳ್ಳೆಯ ಕೆಲಸ; ಅರಗೆಲಸಿ: ಅರೆ ಬರೆ; ಕೊರತೆ: ನ್ಯೂನ್ಯತೆ;

ಪದವಿಂಗಡಣೆ:
ಖರೆಯರೈ +ನೀವ್+ಉಭಯ +ರಾಯರ
ಗುರುಗಳ್+ಅದು +ಕುಂದಿಲ್ಲ +ಕೃಪನೇ
ಹಿರಿಯನ್+ಆಚಾರಿಯನು +ಯಾದವರೊಳಗೆ+ ಕೃತವರ್ಮ
ಗರುವರೈ+ ನೀವಿಲ್ಲಿ+ ರಣ+ಬಾ
ಹಿರರೆ+ ಸಾಕ್+ಅಂತಿರಲಿ +ಸುಕೃತದೊಳ್
ಅರಗೆಲಸಿಗಳು +ನಾವೆ +ನಿಮ್ಮಲಿ +ಕೊರತೆಯಿಲ್ಲೆಂದ

ಅಚ್ಚರಿ:
(೧) ದುರ್ಯೋಧನನು ತನ್ನನ್ನು ನಿಂದಿಸುವ ಪರಿ – ಸುಕೃತದೊಳರಗೆಲಸಿಗಳು ನಾವೆ ನಿಮ್ಮಲಿ ಕೊರತೆಯಿಲ್ಲೆಂದ

ನಿಮ್ಮ ಟಿಪ್ಪಣಿ ಬರೆಯಿರಿ