ಪದ್ಯ ೩೪: ಕೃಪಾದಿ ಶೂರರು ಕೌರವನಿಗೆ ಏನು ಬೇಡಿದರು?

ಏಳು ಕುರುಪತಿ ಪಾಂಡುತನಯ
ವ್ಯಾಳಸೇನೆಗೆ ಸಿಂಹವಿದೆ ನಿ
ನ್ನಾಳ ಬಿಡು ನೀ ನೋಡುತಿರು ಕರ್ಣಾದಿ ಸುಭಟರಲಿ
ಜಾಳಿಸಿದ ಜಯಕಾಮಿನಿಯ ಜಂ
ಘಾಳತನವನು ನಿಲಿಸಿ ನಿನ್ನಯ
ತೋಳಿನಲಿ ತೋರುವೆವು ಮೈದೋರೆಂದರವನಿಪನ (ಗದಾ ಪರ್ವ, ೪ ಸಂಧಿ, ೩೪ ಪದ್ಯ)

ತಾತ್ಪರ್ಯ:
ಕುರುಪತಿಯೇ, ಏಳು. ಪಾಂಡವ ಸೇನೆಯೆಂಬ ಮದಿಸಿದ ಆನೆಗೆ ನಿನ್ನ ವೀರರೇ ಸಿಂಹಗಳು. ನಮ್ಮನ್ನು ಬಿಟ್ಟುನೋಡು, ಕರ್ಣಾದಿ ವೀರರ ಸಂಗ್ರಾಮದಲ್ಲಿ ಓಡಿಹೋದ ಜಯಲಕ್ಷ್ಮಿಯ ವೇಗವನ್ನು ತಡೆದು, ಅವಳು ನಿನ್ನನ್ನು ಅಪ್ಪಿಕೊಳ್ಳುವಂತೆ ಮಾಡುತ್ತೇವೆ, ಹೊರಕ್ಕೆ ಬಂದು ನಮ್ಮೆದುರು ಕಾಣಿಸಿಕೋ ಎಂದು ಕೃಪಾದಿಗಳು ಬೇಡಿದರು.

ಅರ್ಥ:
ತನಯ: ಮಗ; ವ್ಯಾಳ: ಮೋಸಗಾರ; ಸೇನೆ: ಸೈನ್ಯ; ಸಿಂಹ: ಕೇಸರಿ; ಬಿಡು: ತೊರೆ; ನೋಡು: ವೀಕ್ಷಿಸು; ಆದಿ: ಮುಂತಾದ; ಸುಭಟ: ಪರಾಕ್ರಮಿ; ಜಾಳು: ಕೈಲಾಗದವನು, ನಿಷ್ಪ್ರಯೋಜಕ; ಜಯಕಾಮಿನಿ: ವಿಜಯಲಕ್ಷ್ಮಿ; ಜಂಘೆ: ಕೆಳದೊಡೆ; ಆಳತನ: ಪರಾಕ್ರಮ; ನಿಲಿಸು: ತಡೆ; ತೋಳು: ಬಾಹು; ತೋರು: ಗೋಚರಿಸು; ಮೈದೋರು: ಕಾಣಿಸು, ತೋರು; ಅವನಿಪ: ರಾಜ;

ಪದವಿಂಗಡಣೆ:
ಏಳು +ಕುರುಪತಿ +ಪಾಂಡು+ತನಯ
ವ್ಯಾಳಸೇನೆಗೆ +ಸಿಂಹವಿದೆ +ನಿ
ನ್ನಾಳ +ಬಿಡು +ನೀ +ನೋಡುತಿರು+ ಕರ್ಣಾದಿ +ಸುಭಟರಲಿ
ಜಾಳಿಸಿದ +ಜಯಕಾಮಿನಿಯ +ಜಂ
ಘಾಳತನವನು +ನಿಲಿಸಿ +ನಿನ್ನಯ
ತೋಳಿನಲಿ +ತೋರುವೆವು +ಮೈದೋರೆಂದರ್+ಅವನಿಪನ

ಅಚ್ಚರಿ:
(೧) ಗೆಲಿಸು ಎಂದು ಹೇಳುವ ಪರಿ – ಜಾಳಿಸಿದ ಜಯಕಾಮಿನಿಯ ಜಂಘಾಳತನವನು ನಿಲಿಸಿ ನಿನ್ನಯ
ತೋಳಿನಲಿ ತೋರುವೆವು
(೨) ದುರ್ಯೋಧನನಿಗೆ ಶಕ್ತಿ ತುಂಬುವ ಪರಿ – ಪಾಂಡುತನಯ ವ್ಯಾಳಸೇನೆಗೆ ಸಿಂಹವಿದೆ

ನಿಮ್ಮ ಟಿಪ್ಪಣಿ ಬರೆಯಿರಿ