ಪದ್ಯ ೩೩: ಕೃಪ ಅಶ್ವತ್ಥಾಮರು ಕೌರವನಿಗೆ ಯಾವ ಅಭಯವನ್ನು ನೀಡಿದರು?

ಅರಸ ಹೊರವಡು ಭೀಮಪಾರ್ಥರ
ಕರುಳ ಬೀಯವ ಭೂತ ನಿಕರಕೆ
ಬರಿಸುವೆವು ನೀ ನೋಡಲೊಡ್ಡುವೆವಸ್ತ್ರಸಂತತಿಯ
ಗರುವರಿಹರೇ ನೀರೊಳಾ ಹಿಮ
ಕರ ಮಹಾನ್ವಯ ಕೀರ್ತಿ ಜಲದೊಳು
ಕರಗದಿಹುದೇ ಕಷ್ಟವೃತ್ತಿಯದೆಂದರವನಿಪನ (ಗದಾ ಪರ್ವ, ೪ ಸಂಧಿ, ೩೩ ಪದ್ಯ)

ತಾತ್ಪರ್ಯ:
ಒಡೆಯ, ನೀರಿನಿಂದ ಹೊರಕ್ಕೆ ಬಾ, ನಿನ್ನೆದುರಿನಲ್ಲೇ ನಮ್ಮ ಅಸ್ತ್ರಗಳನ್ನೆಲ್ಲಾ ಒಡ್ಡಿ ಭೀಮಾರ್ಜುನರ ಕರುಳನ್ನು ಹೊರಗೆಳೆದು ಭೂತಗಳಿಗೆ ಬಡಿಸುತ್ತೇವೆ. ನಿನ್ನಂತಹ ಸ್ವಾಭಿಮಾನಿ ಶೂರರು ಎಲ್ಲಾದರೂ ನೀರಿನಲ್ಲಿ ಅಡಗಿಕೊಳ್ಳುವರೇ? ಚಂದ್ರವಂಶದ ಕೀರ್ತಿಯು ನಿನ್ನಿಂದಾಗಿ ನೀರಿನಲ್ಲಿ ಕರಗದಿರುವುದೇ?

ಅರ್ಥ:
ಅರಸ: ರಾಜ; ಹೊರವಡು: ಹೊರಗೆ ಬಾ; ಕರುಳು: ಪಚನಾಂಗ; ಬೀಯ: ಉಣಿಸು, ಆಹಾರ; ಭೂತ: ಬೇತಾಳ; ನಿಕರ: ಗುಂಪು; ಬರಿಸು: ತೃಪ್ತಿಪಡಿಸು; ನೋಡು: ವೀಕ್ಷಿಸು; ಒಡ್ಡು: ನೀಡು; ಅಸ್ತ್ರ: ಶಸ್ತ್ರ, ಆಯುಧ; ಸಂತತಿ: ಗುಂಪು; ಗರುವ: ಶ್ರೇಷ್ಠ, ಬಲಶಾಲಿ; ನೀರು: ಜಲ; ಹಿಮಕರ: ಚಂದ್ರ; ಮಹಾನ್ವಯ: ವಂಶ; ಕೀರ್ತಿ: ಯಶಸ್ಸು; ಜಲ: ನೀರು; ಕರಗು: ಮಾಯವಾಗು; ಕಷ್ಟ: ಕಠಿಣ; ವೃತ್ತಿ: ಸ್ಥಿತಿ; ಅವನಿಪ: ರಾಜ;

ಪದವಿಂಗಡಣೆ:
ಅರಸ+ ಹೊರವಡು +ಭೀಮ+ಪಾರ್ಥರ
ಕರುಳ +ಬೀಯವ +ಭೂತ +ನಿಕರಕೆ
ಬರಿಸುವೆವು +ನೀ +ನೋಡಲ್+ಒಡ್ಡುವೆವ್+ಅಸ್ತ್ರ+ಸಂತತಿಯ
ಗರುವರಿಹರೇ +ನೀರೊಳಾ +ಹಿಮ
ಕರ +ಮಹಾನ್ವಯ +ಕೀರ್ತಿ +ಜಲದೊಳು
ಕರಗದಿಹುದೇ +ಕಷ್ಟ+ವೃತ್ತಿಯದೆಂದರ್+ಅವನಿಪನ

ಅಚ್ಚರಿ:
(೧) ರೂಪಕದ ಪ್ರಯೋಗ – ಹಿಮಕರ ಮಹಾನ್ವಯ ಕೀರ್ತಿ ಜಲದೊಳು ಕರಗದಿಹುದೇ ಕಷ್ಟವೃತ್ತಿಯದೆಂದರವನಿಪನ
(೨) ಚಂದ್ರವಂಶ ಎಂದು ಕರೆಯುವ ಪರಿ – ಹಿಮಕರ ಮಹಾನ್ವಯ

ನಿಮ್ಮ ಟಿಪ್ಪಣಿ ಬರೆಯಿರಿ