ಪದ್ಯ ೩೨: ಕೌರವನ ಕೋಪಕ್ಕೆ ಉಳಿದವರು ಏನೆಂದು ಉತ್ತರಿಸಿದರು?

ಜೀಯ ಖತಿಯೇಕೆಮ್ಮೊಡನೆ ಚ
ಕ್ರಾಯುಧನ ಚಾತುರ್ಯದಲಿ ರಣ
ದಾಯತಪ್ಪಿತು ಭಟರು ಬೀತುದು ಹೇಳಲೇನದನು
ಕಾಯಿದರೊ ಕಾದಿದರೊ ಗುರು ಗಾಂ
ಗೇಯ ಸೈಂಧವ ಮಾದ್ರಪತಿ ರಾ
ಧೇಯರನುಗತವಾಗದಿಹುದಪರಾಧ ನಮಗೆಂದ (ಗದಾ ಪರ್ವ, ೪ ಸಂಧಿ, ೩೨ ಪದ್ಯ)

ತಾತ್ಪರ್ಯ:
ಅದಕ್ಕವರು, ಒಡೆಯ ನಮ್ಮ ಮೇಲೇಕೆ ಕೋಪ? ಶ್ರೀಕೃಷ್ಣನ ಚಾತುರ್ಯದಿಂದ ಯುದ್ಧದಲ್ಲಿ ನಮ್ಮ ಲೆಕ್ಕಾಚಾರ ತಲೆಕೆಳಕಾಯ್ತು. ಭೀಷ್ಮ, ದ್ರೋಣ, ಸೈಂಧವ, ಕರ್ಣ, ಶಲ್ಯರು ನಿನ್ನನ್ನು ರಕ್ಷಿಸಲೆಂದೇ ಹೋರಾಡಲಿಲ್ಲವೇ? ಅವರಿಗಾದ ಗತಿ ನಮಗೂ ಅಗದಿದ್ದುದರಿಂದ ನಾವು ಬದುಕಿರುವುದೇ ಅಪರಾಧವೆಂದು ಒಪ್ಪಿಕೊಳ್ಳುತ್ತೇವೆ ಎಂದರು.

ಅರ್ಥ:
ಜೀಯ: ಒಡೆಯ; ಖತಿ: ಕೋಪ; ಆಯುಧ: ಶಸ್ತ್ರ; ಚಾತುರ್ಯ: ಜಾಣತನ; ಆಯ: ಪರಿಮಿತಿ; ತಪ್ಪು: ಸರಿಹೊಂದದಿರುವುದು; ಭಟ: ಸೈನಿಕ; ಬೀತು: ಕಳೆದು; ಹೇಳು: ತಿಳಿಸು; ಕಾಯು: ರಕ್ಷಿಸು; ಕಾದು: ಹೋರಾಡು; ಗುರು: ಆಚಾರ್ಯ; ಗಾಂಗೇಯ: ಭೀಷ್ಮ; ಸೈಂಧವ: ಜಯದ್ರಥ; ಮಾದ್ರಪತಿ: ಶಲ್ಯ; ರಾಧೇಯ: ಕರ್ಣ; ಅನುಗತ: ಜೊತೆಯಲ್ಲಿ ಬರುವವನು; ಅಪರಾಧ: ತಪ್ಪು;

ಪದವಿಂಗಡಣೆ:
ಜೀಯ +ಖತಿಯೇಕ್+ಎಮ್ಮೊಡನೆ +ಚ
ಕ್ರಾಯುಧನ +ಚಾತುರ್ಯದಲಿ+ ರಣದ್
ಆಯತಪ್ಪಿತು +ಭಟರು +ಬೀತುದು +ಹೇಳಲೇನದನು
ಕಾಯಿದರೊ +ಕಾದಿದರೊ +ಗುರು +ಗಾಂ
ಗೇಯ +ಸೈಂಧವ +ಮಾದ್ರಪತಿ+ ರಾ
ಧೇಯರ್+ಅನುಗತವಾಗದಿಹುದ್+ಅಪರಾಧ +ನಮಗೆಂದ

ಅಚ್ಚರಿ:
(೧) ಜೋಡಿ ಪದಗಳ ಬಳಕೆ – ಚಕ್ರಾಯುಧನ ಚಾತುರ್ಯದಲಿ; ಕಾಯಿದರೊ ಕಾದಿದರೊ

ನಿಮ್ಮ ಟಿಪ್ಪಣಿ ಬರೆಯಿರಿ