ಪದ್ಯ ೨೮: ಕೌರವನ ರಕ್ಷಣೆಗೆ ಯಾರು ನಿಂತರು?

ಇಳಿದು ಸರಸಿಯ ಮಧ್ಯದಲಿ ನೃಪ
ತಿಲಕ ನಿಂದನು ಪಾಳೆಯವ ನೀ
ಕಳುಹು ಗಜಪುರಿಗೆನಲು ಬಂದೆನು ಪಥದ ಮಧ್ಯದಲಿ
ಸುಳಿವ ಕಂಡೆನು ಕೃಪನನಾ ಗುರು
ಗಳ ಮಗನ ಕೃತವರ್ಮಕನನಂ
ದುಳಿದ ಮೂವರ ಕಳುಹಿದೆನು ಕುರುಪತಿಯ ಹೊರೆಗಾಗಿ (ಗದಾ ಪರ್ವ, ೪ ಸಂಧಿ, ೨೮ ಪದ್ಯ)

ತಾತ್ಪರ್ಯ:
ದುರ್ಯೋಧನನು ಸರೋವರದ ಮಧ್ಯದಲ್ಲಿ ನಿಂತು, ಪಾಳೆಯವನ್ನು ಹಸ್ತಿನಾಪುರಕ್ಕೆ ಕಳುಹಿಸು ಎನಲು, ನಾನಿಲ್ಲಿಗೆ ಬಂದೆನು. ದಾರಿಯ ನಡುವೆ ಕೃಪಾಚಾರ್ಯ, ಅಶ್ವತ್ಥಾಮ, ಕೃತವರ್ಮರನ್ನು ನೋಡಿದೆ, ಅವರನ್ನು ಕೌರವನ ರಕ್ಷಣೆಗಾಗಿ ದೊರೆಯ ಬಳಿಗೆ ಕಳುಹಿಸಿದೆ ಎಂದು ಸಂಜಯನು ಹೇಳಿದನು.

ಅರ್ಥ:
ಇಳಿ: ಕೆಳಗೆ ಹೋಗು; ಸರಸಿ: ಸರೋವರ; ಮಧ್ಯ: ನಡುವೆ; ನೃಪ: ರಾಜ; ತಿಲಕ: ಶ್ರೇಷ್ಠ; ನಿಂದು: ನಿಲ್ಲು; ಪಾಳೆಯ: ಬಿಡಾರ; ಕಳುಹು: ತೆರಳು; ಗಜಪುರಿ: ಹಸ್ತಿನಾಪುರ; ಬಂದು: ಆಗಮಿಸು; ಪಥ: ಮಾರ್ಘ; ಮಧ್ಯ: ನಡುವೆ; ಸುಳಿ: ಕಾಣಿಸಿಕೊಳ್ಳು; ಕಂಡು: ನೋಡು; ಗುರು: ಆಚಾರ್ಯ; ಮಗ: ಸುತ; ಉಳಿದ: ಮಿಕ್ಕ; ಕಳುಹು: ಬೀಳ್ಕೊಡು; ಹೊರೆ: ರಕ್ಷಣೆ, ಆಶ್ರಯ;

ಪದವಿಂಗಡಣೆ:
ಇಳಿದು +ಸರಸಿಯ +ಮಧ್ಯದಲಿ +ನೃಪ
ತಿಲಕ +ನಿಂದನು +ಪಾಳೆಯವ +ನೀ
ಕಳುಹು +ಗಜಪುರಿಗ್+ಎನಲು +ಬಂದೆನು +ಪಥದ +ಮಧ್ಯದಲಿ
ಸುಳಿವ +ಕಂಡೆನು +ಕೃಪನನ್+ಆ+ ಗುರು
ಗಳ+ ಮಗನ+ ಕೃತವರ್ಮಕನನಂದ್
ಉಳಿದ +ಮೂವರ +ಕಳುಹಿದೆನು+ ಕುರುಪತಿಯ+ ಹೊರೆಗಾಗಿ

ಅಚ್ಚರಿ:
(೧) ದುರ್ಯೋಧನನನ್ನು ಕರೆದ ಪರಿ – ನೃಪತಿಲಕ, ಕುರುಪತಿ

ನಿಮ್ಮ ಟಿಪ್ಪಣಿ ಬರೆಯಿರಿ