ಪದ್ಯ ೨೩: ದುರ್ಯೊಧನನು ಹೇಗೆ ಪಲಾಯನ ಮಾಡಿದನು?

ಬಳಿಕ ನೂರಾನೆಯಲಿ ನಿನ್ನವ
ನಳವಿಗೊಟ್ಟನು ಭೀಮಸೇನನ
ಚಲಗತಿಯ ಚಾತುರ ಚಪೇಟ ಪದಪ್ರಹಾರದಲಿ
ಕಳನೊಳಗೆ ಕೋಡೂರಿ ಮಗ್ಗುಲ
ನೆಲಕೆ ಕೀಲಿಸಲಾನೆಯಿಂದಿಳೆ
ಗಿಳಿದು ಹಾಯ್ದನು ಭಯದಿನೇಕಾಂಗದಲಿ ಕುರುರಾಯ (ಗದಾ ಪರ್ವ, ೪ ಸಂಧಿ, ೨೩ ಪದ್ಯ)

ತಾತ್ಪರ್ಯ:
ಬಳಿಕ ನಿನ್ನ ಮಗನು ನೂರು ಆನೆಗಳೊಡನೆ ಭೀಮನೊಡನೆ ಕಾಳಗಕ್ಕಿಳಿದನು. ಭೀಮನ ಅತಿ ವೇಗದ ಆತುರ್ಯ, ಪದಗಳ ಹೊಡೆತದಿಂದ ಅವನು ಹತ್ತಿದ್ದ ಆನೆಯು ದಂತವನ್ನು ಮಗ್ಗುಲಾಗಿ ನೆಲಕ್ಕೆ ಮಲಗಲು, ಆನೆಯಿಂದಿಳಿದು ಭಯದಿಂದ ಏಕಾಂಗಿಯಾಗಿ ಪಲಾಯನ ಮಾಡಿದನು.

ಅರ್ಥ:
ಬಳಿಕ: ನಂತರ; ನೂರು: ಶತ; ಆನೆ: ಗಜ; ಅಳವಿ: ಶಕ್ತಿ; ಚಲಗತಿ: ಅತಿವೇಗ; ಚಾತುರ: ನಿಪುಣತೆ; ಚಪೇಟ: ಅಭಯಹಸ್ತ; ಪದ: ಪಾದ, ಚರಣ; ಪ್ರಹಾರ: ಹೊಡೆತ, ಪೆಟ್ಟು; ಕಳ: ರಣರಂಗ; ಕೋಡೂರು: ದಂತವನ್ನು ನೆಲಕ್ಕೆ ಊರು; ಮಗ್ಗಲು: ಪಕ್ಕ, ಬದಿ; ನೆಲ: ಭೂಮಿ; ಕೀಲಿಸು: ಜೋಡಿಸು, ಚುಚ್ಚು; ಆನೆ: ಗಜ; ಇಳೆ: ಭೂಮಿ; ಇಳಿ: ಕೆಳಕ್ಕೆ ಬಾ; ಹಾಯ್ದು: ಹೊಡೆ; ಭಯ: ಅಂಜಿಕೆ; ಏಕಾಂಗ: ಒಬ್ಬನೆ; ರಾಯ: ರಾಜ;

ಪದವಿಂಗಡಣೆ:
ಬಳಿಕ +ನೂರಾನೆಯಲಿ+ ನಿನ್ನವನ್
ಅಳವಿಗೊಟ್ಟನು +ಭೀಮಸೇನನ
ಚಲಗತಿಯ +ಚಾತುರ +ಚಪೇಟ +ಪದ+ಪ್ರಹಾರದಲಿ
ಕಳನೊಳಗೆ +ಕೋಡೂರಿ+ ಮಗ್ಗುಲ
ನೆಲಕೆ+ ಕೀಲಿಸಲ್+ಆನೆಯಿಂದ್+ಇಳೆ
ಗಿಳಿದು+ ಹಾಯ್ದನು +ಭಯದಿನ್+ಏಕಾಂಗದಲಿ +ಕುರುರಾಯ

ಅಚ್ಚರಿ:
(೧) ಚ ಕಾರದ ತ್ರಿವಳಿ ಪದ – ಚಲಗತಿಯ ಚಾತುರ ಚಪೇಟ

ನಿಮ್ಮ ಟಿಪ್ಪಣಿ ಬರೆಯಿರಿ